ಕೋಲಾರ: ಕೆ.ಎಚ್.ಮುನಿಯಪ್ಪ (67)
ಪಕ್ಷ: ಕಾಂಗ್ರೆಸ್
ವಿದ್ಯಾರ್ಹತೆ: ಎಲ್ಎಲ್ಬಿ
ವಾಸ: ಕೋಲಾರ
ವೃತ್ತಿ: ರಾಜಕಾರಣ
ಲೋಕಸಭೆ ಚುಣಾವಣೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಹಗಲಿರುಳೆನ್ನದೆ ಸ್ಪರ್ಧಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳ ವ್ಯಕ್ತಿಚರಿತ್ರೆಯ ಕುರಿತ ಟೀಕೆ, ಪ್ರತಿಟೀಕೆಗಳು ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಚ್.ಮುನಿಯಪ್ಪ 1991-ರಿಂದ ಇಲ್ಲಿವರೆಗೆ ನಡೆದಿರುವ ಆರು ಚುನಾವಣೆಗಳಲ್ಲಿ ಗೆದ್ದಿದ್ದಾರೆ. 7ನೇ ಬಾರಿಗೆ ಕಣದಲ್ಲಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದದರ್ಶನ ಇಲ್ಲಿದೆ.
7ನೇ ಬಾರಿ ಸ್ಪರ್ಧಿಸಿರುವ ನಿಮ್ಮ ಮುಂದೆ ಇರುವ ಸವಾಲುಗಳೇನು?
ನನ್ನ ಮುಂದೆ ಸವಾಲು ಎಂಬುದೇ ಇಲ್ಲ. ಇದುವರೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಆಶಾಭಾವನೆಯಿಂದಲೇ ಇರುವೆ.
ಕ್ಷೇತ್ರಕ್ಕೆ ನಿಮ್ಮ ಸಾಧನೆ ಶೂನ್ಯ ಎಂಬ ಆರೋಪದ ಕುರಿತು ಏನು ಹೇಳುವಿರಿ ?
ಆರೋಪದಲ್ಲಿ ಹುರುಳಿಲ್ಲ. ಕ್ಷೇತ್ರದಲ್ಲಿ ಎದ್ದುಕಾಣುವಂಥ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಚುನಾವಣೆಯಲ್ಲಿ ನಿಮ್ಮ ಮಿತಿಗಳು ಎಂಬುವಂಥ ಸಂಗತಿಗಳೇನಾದರೂ ಇವೆಯೇ?
ಯಾವ ಮಿತಿಗಳೂ ಇಲ್ಲ. ಹಾಗೆ ಏನೂ ಅನಿಸಿಲ್ಲ. ಆ ಭಾವವೇ ನನ್ನಲ್ಲಿಲ್ಲ.
ನಿಮ್ಮ ಎದುರಾಳಿಗಳ ಕುರಿತು ಏನು ಹೇಳುತ್ತೀರಿ?
ಎದುರಾಳಿಗಳ ಜೀವನಚರಿತ್ರೆಗಳನ್ನು ತೆರೆದು ನೋಡಿದರೆ ಜನರಿಗೇ ಎಲ್ಲವು ಅರ್ಥವಾಗುತ್ತದೆ. ಎದುರಾಳಿಗಳ ಬಗ್ಗೆ ಯಾವುದೇ ಟೀಕೆ ಮಾಡುವುದಿಲ್ಲ.
ನಿಮಗೆ ವಯಸ್ಸಾಯಿತು ಎಂಬ ಟೀಕೆಗೆ ನಿಮ್ಮ ಉತ್ತರ ಏನು?
ಬಾಯಿಗೆ ಬಂದಂತೆ ಟೀಕೆ ಮಾಡುವವರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಯಾವ ರೀತಿ ಬೇಕಾದರೂ ಮಾತನಾಡಬಹುದು. ಆದರೆ ನಮ್ಮ ಮಾತು, ಟೀಕೆ ಜನರಿಗೆ ಮೆಚ್ಚುಗೆಯಾಗುವಂತಿರಬೇಕು ಅಷ್ಟೆ. ನಮ್ಮ ಮಾತುಗಳೇ ನಮ್ಮನ್ನು ಹಗುರ ಮಾಡಬಾರದು ಎಂದು ನಂಬಿರುವವನು ನಾನು.
ಚುನಾವಣೆಯಲ್ಲಿ ನಿಮ್ಮ ಪ್ರಬಲ ಪ್ರತಿಸ್ಪರ್ಧಿ ಯಾರು?
ಬಿಜೆಪಿ ಅಭ್ಯರ್ಥಿಯೇ ನನ್ನ ಪ್ರಬಲ ಪ್ರತಿಸ್ಪರ್ಧಿ. ಲೋಕಸಭೆ ಚುನಾವಣೆಯು ರಾಷ್ಟ್ರಮಟ್ಟದ್ದು, ಪ್ರಾದೇಶಿಕ ಮಟ್ಟದ್ದಲ್ಲ. ಹೀಗಾಗಿ ರಾಷ್ಟ್ರಮಟ್ಟದ ಪಕ್ಷವೇ ನನ್ನ ಪ್ರತಿಸ್ಪರ್ಧಿಯೇ ಹೊರತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಲ್ಲವೇ ಅಲ್ಲ.
ಕಾಂಗ್ರೆಸ್ಸಿಗರೇ ನಿಮ್ಮ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲ?
ವಾಸ್ತವಾಂಶ ಬೇರೆಯೇ ಇದೆ. ಶಿಡ್ಲಘಟ್ಟದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ಪಕ್ಕದ ಹಳ್ಳಿಯರೊಬ್ಬರು ನಮ್ಮ ಹಳ್ಳಿಗೆ ರಸ್ತೆ ಇಲ್ಲ ಎಂದರು. ಆ ಬಗ್ಗೆ ಸಭೆ ಬಳಿಕ ಮಾತನಾಡೋಣ ಎಂದರೆ ಕೇಳಿಸಿಕೊಳ್ಳುವಷ್ಟು ತಾಳ್ಮೆ ಇರದೆ ಆಕ್ರೋಶ ವ್ಯಕ್ತಪಡಿಸಿದರಷ್ಟೇ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.