ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪು ಘರ್ಷಣೆ; ಲಘು ಲಾಠಿ ಪ್ರಹಾರ

Last Updated 19 ಜುಲೈ 2013, 10:23 IST
ಅಕ್ಷರ ಗಾತ್ರ

ಚಿಂತಾಮಣಿ: ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಯುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ತಾಲ್ಲೂಕಿನ ನಾರಾಯಣಹಳ್ಳಿಯಲ್ಲಿ ಗುರುವಾರ ಪೊಲೀಸ್ ರಕ್ಷಣೆಯಲ್ಲಿ ಕೊಳವೆ ಬಾವಿ ಕೊರೆಯುವ ಕಾಮಗಾರಿ ನಡೆಯಿತು.

ಇದಕ್ಕೆ ಅಡ್ಡಿಪಡಿಸಲು ಯತ್ನಿಸಿದ 10 ಜನ ಮಹಿಳೆಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಕೆಲಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದರಿಂದ ಪೊಲೀಸರು ಲಘು ಪ್ರಹಾರ ನಡೆಸಿದರು.

ವಿವರಣೆ: ನಾರಾಯಣಹಳ್ಳಿಯಲ್ಲಿ ಬುಧವಾರ ಕೊಳವೆ ಬಾವಿ ಕೊರೆಯಲು ಬಂದಿದ್ದ ಬೋರ್‌ವೆಲ್‌ಗೆ ಒಂದು ಗುಂಪು ಅಡ್ಡಿಪಡಿಸಿತ್ತು. `ಪಕ್ಕದಲ್ಲಿ ನಮ್ಮ ಜಮೀನಿದೆ. ಬಡವರಾದ ನಮಗೆ ತೊಂದರೆಯಾಗುತ್ತದೆ' ಎಂದು ವಾದಿಸಿತ್ತು. ಮತ್ತೊಂದು ಗುಂಪು ಅಲ್ಲೇ ಕೊರೆಯಬೇಕೆಂದು ಪಟ್ಟು ಹಿಡಿದಿದ್ದರು. ಗುರುವಾರ ತಹಶೀಲ್ದಾರ್ ಮಂಜುನಾಥ್, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿ, ವಿಫಲವಾದರು. ನಂತರ ಪೊಲೀಸರ ರಕ್ಷಣೆಯಲ್ಲಿ ಕೊಳವೆ ಬಾವಿ ಕಾಮಗಾರಿಗೆ ಆದೇಶ ನೀಡಿದರು.  ಆಗ ಆಕ್ರೋಶಗೊಂಡ ಮಹಿಳೆಯರು `ಸೀಮೆಎಣ್ಣೆ ಸುರಿದುಕೊಂಡು ಸಾಯುವುದಾಗಿ ಡಬ್ಬಗಳೊಂದಿಗೆ ಬೆದರಿಕೆ ಹಾಕಿದಾಗ, ಮಹಿಳಾ ಪೊಲೀಸರು ಬಲವಂತವಾಗಿ ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸ್ ಜೀಪ್ ಹತ್ತಿಸಿ ಠಾಣೆಗೆ ಕರೆದೊಯ್ದರು. ನಂತರ ಪೊಲೀಸ್ ಕಾವಲಿನಲ್ಲಿ ಕೊಳವೆ ಬಾವಿ ಕೊರೆಯುವ ಕೆಲಸವನ್ನು ಆರಂಭಿಸಲಾಯಿತು.

ಕಲ್ಲು ತೂರಾಟ:  ಗ್ರಾಮದ ಗಂಗಾಧರಪ್ಪ, ಶಿವಪ್ಪ, ವೆಂಕಟಸ್ವಾಮಿ ಎಂಬುವವರ ಮನೆಗಳ ಮೇಲೆ ಗುಂಪೊಂದು ಗುಂಪು ಕಲ್ಲು ತೂರಾಟ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ದೌರ್ಜನ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಡಿವೈಎಸ್ಪಿ ಹೇಳಿಕೆ: ಸರ್ಕಾರಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಲು ಕೆಲವರು ಅಡ್ಡಿ ಪಡಿಸುತ್ತಿದ್ದರಿಂದ ರಕ್ಷಣೆ ನೀಡಿ, ಕೊಳವೆ ಬಾವಿ ಕೊರೆಯಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಡಿವೈಎಸ್ಪಿ ದೇವಯ್ಯ ತಿಳಿಸಿದರು. ಗ್ರಾಮದಲ್ಲಿ ಬಲವಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರೂ ಶಾಂತಿಯುತವಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ನೇತೃತ್ವದಲ್ಲಿ ಸಂಜೆ ಎರಡು ಗುಂಪಿನ ಜನರನ್ನು ಸೇರಿಸಿ ಶಾಂತಿ ಸಭೆ ಏರ್ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಕಲ್ಲು ತೂರಾಟದಲ್ಲಿ ತೊಡಗಿದ್ದ ಜನರನ್ನು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT