ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಉಪ ಕರ: 65 ಲಕ್ಷ ಬಾಕಿ !

Last Updated 30 ಜೂನ್ 2011, 9:20 IST
ಅಕ್ಷರ ಗಾತ್ರ

ಕೋಲಾರ: ನಗರದ ಡಾ.ಡಿ.ವಿ.ಗುಂಡಪ್ಪ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಕೋಲಾರ ನಗರಸಭೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಉಪಕರ 30 ಲಕ್ಷ ರೂಪಾಯಿಗೂ ಹೆಚ್ಚು. ಅದೇ ರೀತಿ ಜಿಲ್ಲೆಯ ಉಳಿದ ನಾಲ್ಕು ಪುರಸಭೆಗಳೂ ಲಕ್ಷಾಂತರ ರೂಪಾಯಿ ಗ್ರಂಥಾಲಯ ಉಪಕರವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಒಟ್ಟಾರೆಯಾಗಿ 50ಲಕ್ಷಕ್ಕೂ ಹೆಚ್ಚು ಉಪಕರದ ನಿರೀಕ್ಷೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯವಿದೆ.

ಸ್ಥಳೀಯ ಆಡಳಿತ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸುವ ಒಟ್ಟು ಕರದಲ್ಲಿ ಶೇ 6ಷ್ಟು ಪ್ರಮಾಣದ ಉಪಕರದಿಂದಲೇ ಪುಸ್ತಕಗಳನ್ನು ಖರೀದಿಸ ಬೇಕಾದ, ಗ್ರಂಥಾಲಯವನ್ನು ನಿರ್ವಹಣೆ ಮಾಡಬೇಕಾದ ಅನಿವಾರ್ಯ ಸನ್ನಿವೇಶದ ನಡುವೆ ಜಿಲ್ಲಾ ಕೇಂದ್ರ ಗ್ರಂಥಾಲಯ ಅಸಹಾಯ ಸ್ಥಿತಿಯಲ್ಲಿದೆ. ಜೊತೆಗೆ ಸಿಬ್ಬಂದಿ ಕೊರತೆಯ ಸಮಸ್ಯೆಯೂ ಇದೆ. ತಾಲೂಕು ಗ್ರಂಥಾಲಯಗಳು ಸ್ವಂತ ಕಟ್ಟಡವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿವೆ.

ಕಳೆದ ವರ್ಷ ಜುಲೈ 14ರಂದು ಗ್ರಂಥಾಲಯದ ಮುಖ್ಯ ಗ್ರಂಥಪಾಲಕರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದ ಪ್ರಕಾರ, 2006ಎ ಏಪ್ರಿಲ್ 1ರಿಂದ ಗ್ರಂಥಾಲಯಕ್ಕೆ ಬರಬೇಕಾದ ಉಪಕರದ ವಿವರ ಹೀಗಿದೆ.

ಕೋಲಾರ ನಗರಸಭೆ- ರೂ 30 ಲಕ್ಷ,  ಬಂಗಾರಪೇಟೆ ಪುರಸಭೆ ರೂ 4.80 ಲಕ್ಷ,  ಮಾಲೂರು ಪುರಸಭೆ ರೂ 8.86 ಲಕ್ಷ, ಮುಳಬಾಗಲು ಪುರಸಭೆ ರೂ 2 ಲಕ್ಷ,  ಶ್ರೀನಿವಾಸಪುರ ಪುರಸಭೆ 1.50 ಲಕ್ಷ. ಒಟ್ಟಾರೆಯಾಗಿ 47.20 ಲಕ್ಷ ಉಪಕರವನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಬಾಕಿ ಉಳಿಸಿಕೊಂಡಿವೆ.

ಕಳೆದ ಆಗಸ್ಟ್‌ನಿಂದ ಪ್ರಸ್ತುತ ಮೇ ಅಂತ್ಯದವರೆಗೆ ಈ ಐದು ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಉಪಕರದ ಅಂದಾಜು ರೂ 20 ಲಕ್ಷ. ಇದೂ ಸೇರಿದರೆ ಒಟ್ಟು 67.20 ಲಕ್ಷವಾಗುತ್ತದೆ ಎಂಬುದು ಮುಖ್ಯಗ್ರಂಥಪಾಲಕ ಎಚ್.ಆರ್.ಚೆನ್ನಕೇಶವ ಅವರ ನುಡಿ.

ಗ್ರಂಥಾಲಯ ಇಲಾಖೆ ನಿರ್ದೇಶಕರ ಸೂಚನೆ ಪ್ರಕಾರ, ಬಾಕಿ ಇರುವ ಗ್ರಂಥಾಲಯ ಉಪಕರದ ಕುರಿತು ನಗರದ ಸ್ಥಳೀಯ ಲೆಕ್ಕ ಪರಿಶೋಧನ ವರ್ತುಲದಿಂದ ಮಾಹಿತಿ ಪಡೆದು ಕಳೆದ ಜುಲೈ 24ರಂದು ಆಯಾ ನಗರಸಭೆ, ಪುರಸಭೆಗಳಿಗೆ ಪತ್ರ ಬರೆಯಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.

`ಪ್ರಸ್ತುತ ವರ್ಷದ ಫೆಬ್ರುವರಿಯಲ್ಲಿ ಮತ್ತು ಜೂನ್ ಎರಡನೇ ವಾರದಲ್ಲಿ, ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆದ ಸಭೆಗಳಲ್ಲೂ ಉಪಕಾರ ಬಾಕಿಯ ಕುರಿತು ಗಮನ ಸೆಳೆಯಲಾಯಿತು. ಸಭೆಯಲ್ಲಿ ಪಾಲ್ಗೊಂಡ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಕರ ಪಾವತಿಸುವುದು ಸಾಧ್ಯವಿಲ್ಲ. ತಮ್ಮ ಸಂಸ್ಥೆಗಳೇ ನಷ್ಟದಲ್ಲಿವೆ ಎಂಬ ಕಾರಣವನ್ನು ಮುಂದೊಡ್ಡಿದರು.

ಪ್ರತಿ ಬಾರಿಯೂ ಇದೇ ಕಾರಣವನ್ನು ಮುಂದೊಡ್ಡುವುದು ಸಾಮಾನ್ಯವಾಗಿದೆ~ ಎಂದು ಅವರು ವಿಷಾದಿಸಿದರು.

`ಈ ಸಂಸ್ಥೆಗಳು ಸಾರ್ವಜನಿಕರಿಂದ ಗ್ರಂಥಾಲಯ ಉಪಕರವನ್ನು ಕಡ್ಡಾಯವಾಗಿ ವಸೂಲು ಮಾಡುತ್ತವೆ. ಆದರೆ ಅದನ್ನು ಗ್ರಂಥಾಲಯ ಇಲಾಖೆಗ ಪಾವತಿಸುವಲ್ಲಿ ನಿರ್ಲಿಪ್ತ ಧೋರಣೆಯನ್ನು ಅನುಸರಿಸುತ್ತವೆ.

ಕೆಲವು ಸಂಸ್ಥೆಗಳು ಉಪಕರವನ್ನು ಅನ್ಯ ಉದ್ದೇಶಗಳಿಗೂ ಬಳಸಿಕೊಂಡಿವೆ. ಹೀಗಾಗಿ ಗ್ರಂಥಾಲಯ ಸಮಸ್ಯೆಯಲ್ಲಿ ಸಿಲುಕುವಂತಾಗಿದೆ~ ಎಂದರು.

ನಿರ್ದೇಶಕರ ಭೇಟಿ: ಉಪಕರವನ್ನು ಪಡೆಯುವ ನಿಟ್ಟಿನಲ್ಲಿ ಇತ್ತೀಚೆಗೆ ಪೌರಾಡಳಿತ ಇಲಾಖೆ ನಿರ್ದೇಶಕರನ್ನೂ ಕೂಡ ಭೇಟಿ ಮಾಡಲಾಗಿದೆ. ಉಪಕರವನ್ನು ಗ್ರಂಥಾಲಯಕ್ಕೆ ಪಾವತಿಸುವಂತೆ ನಗರ/ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರಿಗೆ ಮನವಿಯನ್ನೂ ಸಲ್ಲಿಸಲಾಗಿದೆ.

ಅಧಿಕಾರಿಗಳಿಗೆ ಸೂಚಿಸುವುದಾಗಿ ನಿರ್ದೇಶಕರೂ ಭರವಸೆ ನೀಡಿದರು. ಆದರೆ ಪ್ರಯೋಜನ ಮಾತ್ರ ಇನ್ನೂ ಕಂಡಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT