ಬೆಂಗಳೂರು: `ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘವು ವೇತನ ಪರಿಷ್ಕರಣೆಗಾಗಿ ಮೇ 21 ರಂದು ಹಮ್ಮಿಕೊಂಡಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿದೆ~ ಎಂದು ಸಂಘದ ಅಧ್ಯಕ್ಷ ಮುದ್ದುಕೃಷ್ಣ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮೇ 8 ರಂದು ಕಂದಾಯ ಭವನ ಉದ್ಘಾಟನೆ ಸಮಯದಲ್ಲಿ ಗ್ರಾಮ ಸಹಾಯಕರ ಕಾಯಂ ವಿಚಾರದಲ್ಲಿ ಕಂದಾಯ ಅಧಿಕಾರಿಗಳ ಜತೆಗೆ ಮೊದಲ ಸುತ್ತಿನ ಸಭೆ ನಡೆದಿದೆ. ಮೇ 25 ರಂದು ಎರಡನೇ ಸುತ್ತಿನ ಮಾತುಕತೆ ನಡೆಸಿ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ~ ಎಂದರು.
`ಮುಖ್ಯಮಂತ್ರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ~ ಎಂದರು.
`ಹುದ್ದೆಯನ್ನು ಡಿ ಗುಂಪಿಗೆ ಏರಿಸಬೇಕು, ನಿವೃತ್ತಿಯಾದವರಿಗೆ 1 ಲಕ್ಷ ಪರಿಹಾರ ಹಣ, ಸೇವಾ ಅವಧಿಯಲ್ಲಿ ಮರಣ ಹೊಂದಿದವರ ಮಕ್ಕಳಿಗೆ ಉದ್ಯೋಗ ನೀಡಬೇಕು. ನಿವೃತ್ತಿಯಾದವರಿಗೆ ಪಿಂಚಣಿ ಸೇರಿದಂತೆನಾನಾ ಬೇಡಿಕೆಗಳಿವೆ~ ಎಂದರು.