ಹುಮನಾಬಾದ್: ಗ್ರಾಮ ಸ್ವಚ್ಛತೆಯಲ್ಲಿ ಮಹಿಳೆ ಪಾತ್ರ ಅತ್ಯಂತ ಹಿರಿದು ಎಂದು ಜಲನಿರ್ಮಲ ಯೋಜನೆ ಸಹಾಯಕ ನಿರ್ದೇಶಕ ಸಿ.ಎಂ.ಗೌಡತಿ ತಿಳಿಸಿದರು. ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಈಚೆಗೆ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರಿಗಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಯಲು ಶೌಚಕ್ಕೆ ಸಂಪೂರ್ಣ ವಿರಾಮ ಹೇಳಿ, ಕಡ್ಡಾಯವಾಗಿ ವಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕು ಮತ್ತು ಕೊಳೆವೆ ಬಾವಿ ಇತ್ಯಾದಿಗಳು ಇರುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು, ಮನೆಯ ಬಚ್ಚಲ ನೀರು ಸರಾಗ ಚರಂಡಿಗೆ ಹರಿಯಲು ಬಿಡುವುದು ಮೊದಲಾದ ಮಹತ್ವದ ವಿಷಯ ಕುರಿತು ಗೌಡತಿ ವಿವರಣೆ ನೀಡಿದರು.
ಜಲನಿರ್ಮಲ ಇಲಾಖೆಯ ಸಂಪನ್ಮೂಲ ವ್ಯಕ್ತಿ ಭವ್ಯಾ ಹಾಗೂ ಜಿಲ್ಲಾ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿಮಠ್ ಪರಿಸರ ಸಂರಕ್ಷಣೆ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಪಾವತಿ ಪ್ರಭು ರಾಜೆಶ್ವರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಜಲೀಲ್ ಅಹ್ಮದ್, ಸಂಪತ್ ದರ್ಗೆ, ಮಾಯಾದೇವಿ ಮೊದಲಾದವರು ವೇದಿಕೆಯಲ್ಲಿ ಇದ್ದರು. ಮಾಣಿಕರಾವ ಬಿ.ಪವಾರ ನಿರೂಪಿಸಿದರು. ಅರುಣಕುಮಾರ ವಂದಿಸಿದರು.