ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶ ಸೇವೆ ಅಪಥ್ಯ!

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

 ಬೆಂಗಳೂರು: ಕೋರ್ಸ್ ಪೂರ್ಣಗೊಳಿಸಿದ ನಂತರ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಷರತ್ತು ಪಾಲಿಸುವುದಾಗಿ ತಾವೇ ಬರೆದುಕೊಟ್ಟಿದ್ದ ಮುಚ್ಚಳಿಕೆಗೆ ಕಿಮ್ಮತ್ತು ನೀಡದ ಎಂಬಿಬಿಎಸ್,  ಡಿಪ್ಲೊಮಾ ಮತ್ತು ್ನತಕೋತ್ತರ ವೈದ್ಯ ಪದವೀಧರರು ದಂಡ ಪಾವತಿಸಲು ಮುಂದಾಗಿದ್ದಾರೆ.

427 ಎಂಬಿಬಿಎಸ್ ಪದವೀಧರರು ಈಗಾಗಲೇ ತಲಾ 1 ಲಕ್ಷ ರೂಪಾಯಿಯಂತೆ 4.27 ಕೋಟಿ ರೂಪಾಯಿ ದಂಡ ಪಾವತಿಸಿದ್ದಾರೆ. ಆದರೆ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದಿರುವ 698 ಮಂದಿ ಇದುವರೆಗೆ ದಂಡ ಪಾವತಿಸಿಲ್ಲ, ಸೇವೆಗೂ ಹಾಜರಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ            ತಿಳಿಸಿದರು.

ಜೂನ್ 1ರಂದು 686 ಮಂದಿ ಪದವೀಧರರಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಿ ಸೇವೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಪೈಕಿ 109 ಮಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 427 ಮಂದಿ ದಂಡ ಪಾವತಿಸಿದ್ದಾರೆ. 85 ಮಂದಿಯ ವಿಳಾಸವೇ ಪತ್ತೆಯಾಗಿಲ್ಲ. ಉಳಿದವರು ಸ್ಥಳ ಆಯ್ಕೆ ಮಾಡಿಕೊಂಡಿಲ್ಲ, ದಂಡವನ್ನೂ ಪಾವತಿಸಿಲ್ಲ ಎಂದು ಅವರು ವಿವರಿಸಿದರು.

ನಿಯಮ: ವೃತ್ತಿಶಿಕ್ಷಣ ಸಂಸ್ಥೆಗಳ ಸರ್ಕಾರಿ ಕೋಟಾದ ಸೀಟು ಪ್ರವೇಶ ನಿಯಮಾವಳಿ 2006ರ ಪ್ರಕಾರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಪದವಿ ಪಡೆದ ನಂತರ ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸಬೇಕು. ಇದನ್ನು ಉಲ್ಲಂಘಿಸಿದರೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಬೇಕು.

ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಮತ್ತು ಪ್ರವೇಶ ನಿಯಮಾವಳಿ 2006ರ ಪ್ರಕಾರ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದ ನಂತರ ಕನಿಷ್ಠ ಮೂರು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ವ್ಯಾಸಂಗ ಅವಧಿಯಲ್ಲಿ ಶೇ 100ರಷ್ಟು ಶುಲ್ಕ ವಿನಾಯಿತಿ ಪಡೆದವರಾದರೆ ಐದು ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಸ್ನಾತಕೋತ್ತರ ಪದವೀಧರರಿಗೆ ರೂ 5 ಲಕ್ಷ, ಡಿಪ್ಲೊಮಾ ಪಡೆದವರಿಗೆ ರೂ 3 ಲಕ್ಷ  ದಂಡ ವಿಧಿಸಲಾಗುತ್ತದೆ.

2006-07ನೇ ಸಾಲಿನಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದು ಜಾರಿಗೆ ಬಂದಿದೆ. ಆ ಸಾಲಿನಲ್ಲಿ ಮುಚ್ಚಳಿಕೆ ನೀಡಿ ಎಂಬಿಬಿಎಸ್ ಪದವಿಗೆ ಸೇರಿದ್ದ ಅಭ್ಯರ್ಥಿಗಳು ಕಳೆದ ವರ್ಷ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಸರ್ಕಾರ ಕಳೆದ ಏಪ್ರಿಲ್ 20ರಂದು ಹೊರಡಿಸಿರುವ ಆದೇಶದ ಪ್ರಕಾರ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಖಾಲಿ ಇರುವ ಹುದ್ದೆಗಳಿಗೆ ನಿಯೋಜಿಸಲಾಗಿತ್ತು.

ಕೋರ್ಸ್‌ಗೆ ಸೇರುವಾಗ ಅಭ್ಯರ್ಥಿ ಹಾಗೂ ಅವರ ಪೋಷಕರು ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿದ್ದು, ಆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಕೋರ್ಸ್ ಪೂರ್ಣಗೊಳಿಸಿದ ನಂತರ `ದಂಡ ಪಾವತಿಸುತ್ತೇವೆ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದಿಲ್ಲ~ ಎಂಬ ಹೊಸ ರಾಗ ತೆಗೆದಿರುವುದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.

ಕೋರ್ಟ್ ಮೊರೆ: 2008-09 ಹಾಗೂ 2009-10ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದಿರುವ 716 ಮಂದಿ ಪೈಕಿ 15 ಮಂದಿ ಮಾತ್ರ ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದ 698 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ನೋಟಿಸ್‌ಗೆ ಉತ್ತರ ನೀಡಿಲ್ಲ.

20ಕ್ಕೂ ಹೆಚ್ಚು ಮಂದಿ ಹೈಕೋರ್ಟ್ ಮೊರೆ ಹೋಗಿದ್ದು, ಸರ್ಕಾರದ ಆದೇಶ  ರದ್ದು ಡಿಸುವಂತೆ ಕೋರಿದ್ದಾರೆ. `ಸ್ನಾತಕೋತ್ತರ ಪದವಿ ಪಡೆದ ಒಂದು ವರ್ಷದ ನಂತರ ಕೌನ್ಸೆಲಿಂಗ್‌ಗೆ ಕರೆಯಲಾಗಿದೆ. ಆದರೆ ನಾವು ಈಗಾಗಲೇ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದೇವೆ. ಇದರಿಂದಾಗಿ ಕೌನ್ಸೆಲಿಂಗ್‌ಗೆ ಹಾಜರಾಗಿಲ್ಲ~ ಎಂದು ಕೆಲವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅನುಷ್ಠಾನ ಕೋಶ: ಗ್ರಾಮೀಣ ಸೇವೆ ಕಡ್ಡಾಯ ಕಾಯ್ದೆ ಅನುಷ್ಠಾನ ಸಂಬಂಧ ಪ್ರತ್ಯೇಕವಾಗಿ `ಪ್ರಮಾಣಪತ್ರ ಅನುಷ್ಠಾನ ಕೋಶ~ವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪದವಿ ಪೂರ್ಣಗೊಳಿಸಿದ ಪದವೀಧರರಿಗೆ ಕಾಲ ಕಾಲಕ್ಕೆ ಕೌನ್ಸೆಲಿಂಗ್ ಏರ್ಪಡಿಸಿ ಸ್ಥಳ ನಿಯೋಜನೆಗೊಳಿಸಲು ಅನುಕೂಲವಾಗುತ್ತದೆ ಎಂದು ಈ ಅಧಿಕಾರಿ  ಅಭಿಪ್ರಾಯಪಟ್ಟರು.      
    
           ರಾಜ್ಯಪಾಲರ ಅಂಗಳದಲ್ಲಿ ಹೊಸ ಕಾಯ್ದೆ
ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ ಪಡೆದವರು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವ ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳು ಕಳೆದ ಆಗಸ್ಟ್‌ನಲ್ಲಿಯೇ ಒಪ್ಪಿಗೆ ನೀಡಿವೆ.

ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ನಿರಾಕರಿಸಿದರೆ ಎಂಬಿಬಿಎಸ್ ಪದವೀಧರರಿಗೆ ರೂ 15 ಲಕ್ಷ, ಸ್ನಾತಕೋತ್ತರ ಡಿಪ್ಲೊಮಾ ಪಡೆದವರಿಗೆ ರೂ 20 ಲಕ್ಷ ಹಾಗು ಸ್ನಾತಕೋತ್ತರ ಪದವೀಧರರಿಗೆ ರೂ 25 ಲಕ್ಷ ರೂಪಾಯಿ ದಂಡ ವಿಧಿಸಲು ಇದರಲ್ಲಿ ಅವಕಾಶವಿದೆ. ಆದರೆ ಮಸೂದೆಗೆ ಇನ್ನೂ ರಾಜ್ಯಪಾಲರ ಒಪ್ಪಿಗೆ ದೊರೆತಿಲ್ಲ.

ಈಗಾಗಲೆ ಸಂಬಂಧಿಸಿದ ನಿಯಮಾವಳಿ ರೂಪಿಸಲಾಗಿದೆ. ರಾಜ್ಯಪಾಲರ ಒಪ್ಪಿಗೆ ದೊರೆತ ನಂತರ ಅನುಷ್ಠಾನಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
                                                                                                                                                                                                                                                                                                                                                                                                                                                                                                                                          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT