ಲಕ್ಕುಂಡಿ (ಗದಗ ತಾ.): ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮಾಹಿತಿ ಹಕ್ಕಿನಲ್ಲಿ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಪಡೆದುಕೊಂಡಿರುವ ದಾಖಲೆಯಲ್ಲಿ ಕಾಮಗಾರಿ ನಡೆಯದಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದ್ದು, ರೂ. 40 ಲಕ್ಷ ಅನುದಾನ ದುರ್ಬಳಕೆ ಆಗಿದೆ ಎಂದು ವೇದಿಕೆ ದೂರಿದೆ. 2009ರಿಂದ 2013ರವರೆಗೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಗ್ರಾಮದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ದಾಖಲೆಯಲ್ಲಿ ಹೆಸರಿಸಿರುವ ಇಪ್ಪತ್ತು ಕಾಮಗಾರಿಗಳ ಕೆಲಸವೇ ನಡೆದಿಲ್ಲ. ಆದರೂ ಬಿಲ್ ಪಾವತಿಯಾಗಿದೆ.
ಉದಾಹರಣೆಗೆ ಗ್ರಾಮ ಪಂಚಾಯಿತಿ ಕಟ್ಟಡ ಮೇಲೆ ಮಳೆ ನೀರು ಸಂಗ್ರಹಕ್ಕೆ ರೂ. 1.44 ಲಕ್ಷ, ಕೋಟೆ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ರಂಗ ಮಂದಿರ ನಿರ್ಮಾಣಕ್ಕೆ ರೂ. 1 ಲಕ್ಷ , ಹೊಸ ಪ್ಲಾಟ್ನಲ್ಲಿ ರಂಗಮಂದಿರ ರೂ. 2.67 ಲಕ್ಷ, ಗೌಡರ ಓಣಿಯಲ್ಲಿ ರಂಗಮಂದಿರ ರೂ. 77 ಸಾವಿರ, ಹಾಲಗೊಂಡ ಬಸವೇಶ್ವರ ದೇವಸ್ಥಾನ ಹತ್ತಿರ ರಂಗ ಮಂದಿರ ನಿರ್ಮಾಣ ರೂ. 2.67 ಲಕ್ಷ, ಕುರಹಿನಶೆಟ್ಟಿ ದೈವದ ಮನೆ ಹತ್ತಿರ ರಂಗ ನಿರ್ಮಾಣ ರೂ. 1.81 ಲಕ್ಷ ವೆಚ್ಚ ತೋರಿಸಲಾಗಿದೆ. ವಾಸ್ತವವಾಗಿ ಇಲ್ಲಿ ಕಾಮಗಾರಿಯೇ ನಡೆದಿಲ್ಲ. ಆದರೂ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ. ಅಚ್ಚರಿಯ ವಿಷಯವೆಂದರೆ ಒಂದೇ ಕಾಮಗಾರಿಗೆ ಮೂರು ಬಾರಿ ವೆಚ್ಚ ತೋರಿಸಿ ಹಣ ಪಡೆಯಲಾಗಿದೆ. ಅದರಲ್ಲಿ ಗೌಡರ ಓಣಿಯ ರಂಗ ಮಂದಿರ ನಿರ್ಮಾಣಕ್ಕೆ ಮೊದಲ ಬಾರಿ ರೂ.1ಲಕ್ಷ, ಎರಡನೇ ಸಲ ರೂ. 45 ಸಾವಿರ, ಮೂರನೇ ಬಾರಿ 77 ಸಾವಿರ ವೆಚ್ಚ ತೋರಿಸಲಾಗಿದೆ. ಅಲ್ಲಿ ಆ ರೀತಿಯ ಯಾವುದೇ ಕೆಲಸ ನಡೆದಿಲ್ಲ.
ಮತ್ತೊಂದು ಪ್ರಕರಣದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ರಂಗ ಮಂದಿರಕ್ಕೆ ರೂ. 1ಲಕ್ಷ, ಎರಡನೇ ಬಾರಿ ರೂ. 1.84 ಲಕ್ಷ ತೋರಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಕಾಮಗಾರಿ ನಡೆದಿರುವ ಯಾವುದೇ ಕುರುಹು ಪತ್ತೆಯಾಗಲಿಲ್ಲ.
ಇನ್ನೂ ಕೆರೆ ಹೂಳು ಎತ್ತಲು ರೂ. 1.25 ವೆಚ್ಚ ಮಾಡಲಾಗಿದೆ. ನಾಮಕಾವಸ್ಥೆಗೆ ಒಂದೆಡೆ ಹೂಳು ತೆಗೆದು ಹಾಗೆ ಬಿಡಲಾಗಿದೆ. ಕದಾಂಪೂರ ಮತ್ತು ಕಣಗಿನಹಾಳ ರಸ್ತೆಗೆ ಕಾಟಾಚಾರಕ್ಕೆ ಮಣ್ಣು ಸುರಿಯಲಾಗಿದೆ. ಆರು ರಸ್ತೆಗಳ ಅಭಿವೃದ್ಧಿಗೆ ರೂ. 17 ಲಕ್ಷ ವೆಚ್ಚ ಮಾಡಲಾಗಿದೆ.
ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಎಚೆ್ಚತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು. ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ.
‘ಕಾಮಗಾರಿಗಳನ್ನು ಪರಿಶೀಲಿಸಲು ಎಂಟು ದಿನಗಳ ಸಮಯ ಅವಕಾಶ ಬೇಕಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ.ತುರಮರಿ ಅವರು ರಕ್ಷಣಾ ವೇದಿಕೆ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಈಗ ಗ್ರಾಮ ಪಂಚಾಯಿತಿ ಎದುರು ಕರ್ನಾಟಕ ರಕ್ಷಣಾ ವೇದಿಕೆ, ಲಕ್ಕುಂಡಿ ಅಭಿವೃದ್ಧಿ ಹಿತರಕ್ಷಣಾ ಸಮಿತಿ, ನವ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ.
ಗದಗ ತಾಲ್ಲೂಕು ಮಾಜಿ ಅಧ್ಯಕ್ಷ ಎಂ.ಎನ್.ಉಮಚಗಿ ಮಾತನಾಡಿ, ‘ಕೇವಲ ಐದು ಲಕ್ಷ ರೂಪಾಯಿ ವರೆಗಿನ ಕಾಮಗಾರಿಗಳ
ದಾಖಲೆ ಪಡೆಯಲಾಗಿದೆ. ಅದಕ್ಕಿಂತ ಮೇಲ್ಪಟ್ಟ ಕಾಮಗಾರಿಗಳು ಇ ಟೆಂಡರ್ ಆಗಿವೆ. ಲಭ್ಯ ಮಾಹಿತಿ ಪ್ರಕಾರ ರೂ. 40 ಲಕ್ಷ ದುರ್ಬಳಕೆ ಆಗಿರುವುದು ಪತ್ತೆಯಾಗಿದೆ. ಗುತ್ತಿಗೆದಾರನ ಲೈಸೆನ್ಸ್ ರದ್ದುಗೊಳಿಸಿ, ಹಣ ವಸೂಲಿ ಮಾಡಬೇಕು. ಕಾಮಗಾರಿ ಪರಿಶೀಲಿಸಿದ ಅಧಿಕಾರಿಯನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.
ಅವ್ಯವಹಾರ ನಡೆದಿರುವುದು ಸತ್ಯ
‘ಗ್ರಾಮದಲ್ಲಿ ಕಾಮಗಾರಿ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ರಸ್ತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರು. ಸದಸ್ಯರ ಜತೆ ಟೆಂಪೋ ಮಾಡಿಕೊಂಡು ಸ್ಥಳ ಪರಿಶೀಲಿಸಿದಾಗ ರಸ್ತೆ ಮೇಲೆ ಮಣ್ಣು ಸುರಿಯಲಾಗಿತ್ತು. ಬಿಲ್ ಮಾಡದಂತೆ ಜೂನಿಯರ್ ಎಂಜಿನಿಯರ್ ಚಾಟೆ ಅವರಿಗೆ ಮನವಿ ಮಾಡಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕಾಮಗಾರಿ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದರು. ನಿಮಗೆ ಗೊತ್ತಿಲ್ಲದೆ ಕೆಲಸ ಮಾಡುವುದಾದರೆ ಕುರ್ಚಿಯಲ್ಲಿ ಏಕೆ ಕುಳಿತ್ತಿದ್ದೀರಿ ಅಂಥ ಜನರು ಪ್ರಶ್ನಿಸುತ್ತಾರೆ’.
–ಗಂಗಮ್ಮ ಮಜ್ಜಿಗುಡ್ಡ, ಲಕ್ಕುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ರಾಷ್ಟ್ರೀಯ ಹೆದ್ದಾರಿ ಬಂದ್
‘ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಬವ್ವ ಪಾಟೀಲ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ, ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು. ನಂತರ ಎನ್.ಎಚ್. 63 ಬಂದ್ ಮಾಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾದರೆ ಜಿಲ್ಲಾಡಳಿತವೇ ಹೊಣೆ’.
–ಅಮರೇಶ ಎಚ್.ಕರೇಕಲ್, ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಜಿಲ್ಲಾ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.