ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕಪ್ಪುಶಿಲೆ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

Last Updated 8 ಸೆಪ್ಟೆಂಬರ್ 2011, 10:35 IST
ಅಕ್ಷರ ಗಾತ್ರ

ಚಾಮರಾಜನಗರ: ಅರಣ್ಯ ಹಾಗೂ ವನ್ಯಜೀವಿ ಸಂಕುಲಕ್ಕೆ ಕಂಟಕ ಎದುರಾಗಿರುವ ಹಿನ್ನೆಲೆಯಲ್ಲಿ ಜ್ಲ್ಲಿಲಾ ವ್ಯಾಪ್ತಿ ನಡೆಯುತ್ತಿರುವ ಕಪ್ಪುಶಿಲೆ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರುವಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ನಿರ್ಧರಿಸಿದೆ.

`ಚಾಮರಾಜನಗರ ಮತ್ತು ಕೊಳ್ಳೇಗಾಲ ತಾಲ್ಲೂಕಿನ ಸರ್ಕಾರಿ ಜಮೀನಿನಲ್ಲಿ 2004- 05ರಿಂದ 2006-07ನೇ ಸಾಲಿನವರೆಗೆ ನಡೆದಿರುವ ಅಕ್ರಮ ಕಪ್ಪುಶಿಲೆ ಗಣಿಗಾರಿಕೆ ಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟವಾಗಿದೆ. ಗಣಿಗಾರಿಕೆ ಪ್ರದೇಶದ ಪಕ್ಕದಲ್ಲಿಯೇ ಬಿಆರ್‌ಟಿ ಹುಲಿ ರಕ್ಷಿತಾರಣ್ಯ ಹಾಗೂ ಕಾವೇರಿ ವನ್ಯಜೀವಿಧಾಮವಿದೆ. ಕೆಲವು ಜನಪ್ರತಿನಿಧಿಗಳು ಬೇನಾಮಿ ಹೆಸರಿನಡಿ ಗಣಿಗಾರಿಕೆ ಮಾಡುತ್ತಿದ್ದಾರೆ. ಗಣಿ ಉದ್ಯಮಿ ಗಳು ಕೂಡ ಗೋಮಾಳ ಸೇರಿದಂತೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ~ ಎಂದು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ. ಮಹೇಶ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಾರ್ಯಾಂಗ ಹಾಗೂ ಶಾಸಕಾಂಗ ಭ್ರಷ್ಟ ಗೊಂಡಿವೆ. ಹೀಗಾಗಿ, ಜಿಲ್ಲೆಯಲ್ಲಿ ಅಕ್ರಮ ಗಣಿ ಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯ ಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಷೇಧ ಹೇರಲು ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ. ಲೋಕಾಯುಕ್ತರಿಗೂ ದೂರು ಸಲ್ಲಿಸಲಾಗುವುದು ಎಂದರು.

ಮಹಾಲೇಖಪಾಲರು ನಡೆಸಿದ ತಪಾಸಣೆ ಯಿಂದ ಸರ್ಕಾರಕ್ಕೆ ನಷ್ಟವಾಗಿರುವ ಅಂಶ ಬೆಳಕಿಗೆ ಬಂದಿದೆ. ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದ ಸರ್ವೇ ನಂ. 184ರಲ್ಲಿ ನಡೆದಿರುವ ಗಣಿಗಾರಿಕೆಯಿಂದ ಒಟ್ಟು 888.79 ಕೋಟಿ ರೂ ನಷ್ಟವಾಗಿದೆ. ಈ ಸರ್ವೇ ನಂಬರ್ ಗೋಮಾಳವಾಗಿದ್ದು, ಒಟ್ಟು 226 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಹುಲಿ ರಕ್ಷಿತಾರಣ್ಯ ಇದೆ. ಸರ್ಕಾರಿ ಅಧಿಕಾರಿಗಳೇ ಗೋಮಾಳದಲ್ಲಿ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಟ್ಟಿರುವುದು ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.

ಕೊಳ್ಳೇಗಾಲ ತಾಲ್ಲೂಕಿನ ಪೊನ್ನಾಚಿ ಮತ್ತು ಚಂಗಡಿ ಗ್ರಾಮದಲ್ಲಿ ನಡೆದಿರುವ ಗಣಿಗಾರಿಕೆ ಯಿಂದ ಒಟ್ಟು 792 ಕೋಟಿ ರೂ ನಷ್ಟವಾಗಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗಿದೆ. ಕೂಡಲೇ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜತೆಗೆ, ನಷ್ಟದ ಹಣ ವಸೂಲಿ ಮಾಡಬೇಕು ಎಂದರು.

ಕೂಡಲೇ, ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿಧಾಮದ 10 ಕಿ.ಮೀ. ಪ್ರದೇಶವನ್ನು ಸೂಕ್ಷ್ಮ ಸಂವೇದಿ ವಲಯವನ್ನಾಗಿ ಘೋಷಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಕಬಿನಿ-2ನೇ ಹಂತದ ಯೋಜನೆ ಸ್ಥಗಿತದ ಹಿಂದೆ ಗಣಿ ಉದ್ಯಮಿಗಳ ಕೈವಾಡವಿದೆ ಎಂದು ದೂರಿದರು.

ಜಿಲ್ಲಾ ಪರಿಸರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಪುಣಜನೂರು ದೊರೆಸ್ವಾಮಿ ಮಾತನಾಡಿ, ಜ್ಯೋತಿಗೌಡನಪುರದ ಗೋಮಾಳ ದಲ್ಲಿಯೇ ಗಣಿಗಾರಿಕೆ ನಡೆದಿದೆ. ಗೋಮಾಳ ವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಕೆಲವರಿಗೆ ಖಾತೆ ಮಾಡಿಕೊಟ್ಟು ಗಣಿಗಾರಿಕೆಗೆ ಅಧಿಕಾರಿಗಳೇ ಅನುವು ಮಾಡಿೂಟ್ಟಿದ್ದಾರೆ ಎಂದು ದೂರಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಮಾತನಾಡಿ, `ರೈತ ಸಂಘದೊಟ್ಟಿಗೆ ಜನಪರ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಗಣಿಗಾರಿಕೆ ನಿಷೇಧಿಸಲು ಹೋರಾಟ ರೂಪಿಸಲಾಗುವುದು. ಕೂಡಲೇ, ಸರ್ಕಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದರು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ. ಸಿದ್ದರಾಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT