ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಮುಂದೆ ಭಾರತೀಯ ಆರ್ಥಿಕ ಬೇಹುಗಾರಿಕಾ ಸಂಸ್ಥೆಯು ಬುಧವಾರ ತನ್ನ ವಿವರ ಸಲ್ಲಿಸಿತು.
1988ರಿಂದ 2008ರ ನಡುವಿನ ಅವಧಿಯಲ್ಲಿ ಭಾರತೀಯ ದೂರವಾಣಿ ಪರವಾನಗಿ ಬೆಲೆ ನಿಗದಿಯ ನೀತಿಗಳು ಏನಿದ್ದವು ಎಂಬುದನ್ನು ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯದ ನಿರ್ದೇಶಕ ಅರುಣ್ ಮಾಥುರ್ ಹಾಗೂ ಇತರ ಅಧಿಕಾರಿಗಳು ವಿವರಿಸಿದರು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಕಂದಾಯ ಬೇಹುಗಾರಿಕೆ ನಿರ್ದೇಶನಾಲಯದ (ಡಿಆರ್ಐ) ಅಧಿಕಾರಿಗಳೂ ಜೆಪಿಸಿಗೆ ವಿವರ ನೀಡಿದರು. ಮಂಗಳವಾರವಷ್ಟೇ ಜೆಪಿಸಿ ಮುಖ್ಯಸ್ಥ ಪಿ.ಸಿ.ಚಾಕೊ ಸಿಬಿಐ ಮುಖ್ಯಸ್ಥ ಎ.ಪಿ.ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಜಾಮೀನು ಅರ್ಜಿ ಸಲ್ಲಿಕೆ: ಸ್ಪೆಕ್ಟ್ರಂ ಹಗರಣದ ಪ್ರಮುಖ ಆರೋಪಿ ಹಾಗೂ ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಉಸ್ಮಾನ್ ಬಲ್ವಾ ಬುಧವಾರ ದೆಹಲಿ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು.
ನ್ಯಾಯಮೂರ್ತಿ ಅಜಿತ್ ಭಾರಿಹೋಕ್ ಅವರು ಅರ್ಜಿ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಗೊಸಿದ್ದಾರೆ.