ಇಸ್ಲಾಮಾಬಾದ್ (ಪಿಟಿಐ): ದಕ್ಷಿಣ ವಾಜಿರಿಸ್ತಾನದ ಮೇಲೆ ಅಮೆರಿಕ ಪದೇಪದೇ ನಡೆಸುತ್ತಿರುವ ಡ್ರೋಣ್ ದಾಳಿ ವಿರೋಧಿಸಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಮೊದಲ ಹಂತದ ಮೆರವಣಿಗೆ ಶಾಂತಿಯುವಾಗಿ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ಮಾಜಿ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಸೇರಿದಂತೆ ತೆಹರಿಕ್-ಎ- ಇನ್ಸಾಫ್ ಪಕ್ಷದ ಅನೇಕ ಮುಖಂಡರು ಪಾಲ್ಗೊಂಡಿದ್ದರು. ಶನಿವಾರ ನೂರಾರು ವಾಹನಗಳ ಮೂಲಕ ಇಸ್ಲಾಮಾಬಾದ್ನಿಂದ ಹೊರಟ ಮೆರವಣಿಗೆ ರಾತ್ರಿ ಖೈಬರ್- ಪಕ್ತುಂಕ್ವಾ ಪ್ರಾಂತ್ಯವನ್ನು ಪ್ರವೇಶಿಸಿತು. ಮುಂದಿನ ಹಂತದಲ್ಲಿ ಟ್ಯಾಂಕ್ ಟೌನ್ ಮೂಲಕ ಮೆರವಣಿಗೆ ಮುಂದುವರಿಸಲಿದ್ದು ಕೊಟಕೋಯಿ ಪ್ರದೇಶದಲ್ಲಿ ಇದು ಮುಕ್ತಾಯಗೊಳ್ಳಬೇಕಿದೆ.
ಏಕೆಂದರೆ `ರಾಜ್ಯಪಾಲರ ಆದೇಶದಂತೆ ಖೈಬರ್ ಪಕ್ತುಂಕ್ವಾ ಪ್ರಾಂತ್ಯಕ್ಕೆ ಮೆರವಣಿಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ~ ಎಂದು ಸಮಾಚಾರ ಖಾತೆಯ ಸಚಿವ ಇಫ್ತಿಕಾರ್ ಹಸಿನ್ ಅವರು ತಿಳಿಸಿದ್ದಾರೆ.
`ಈ ಶಾಂತಿ ಮೆರವಣಿಗೆಗೆ ತಾಲಿಬಾನ್ ಉಗ್ರರು ಯಾವುದೇ ಬೆದರಿಕೆ ಹಾಕಿಲ್ಲ. ಆದರೆ ಸರ್ಕಾರ ಉಗ್ರರ ಸಂಭಾವ್ಯ ದಾಳಿಯ ನೆಪವೊಡ್ಡಿ ಮೆರವಣಿಗೆಯನ್ನು ನಿಲ್ಲಿಸಲು ಯತ್ನಿಸುತ್ತಿದೆ~ ಎಂದು ಖಾನ್ ಶನಿವಾರ ಆಪಾದಿಸಿದ್ದರು.
ಶಾಂತಿ ಮೆರವಣಿಗೆಯಲ್ಲಿ ಪಾಲ್ಗೊಂಡ ಜನರನ್ನು ಉದ್ದೇಶಿಸಿ ಮಾತನಾಡಿದ ಖಾನ್ `ಡ್ರೋಣ್ ದಾಳಿಯ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಮ್ಮ ಉದ್ದೇಶ ಭಾಗಶಃ ಸಫಲಗೊಂಡಿದೆ. ಇಡೀ ವಿಶ್ವವೇ ನಮ್ಮ ಕಾರ್ಯವನ್ನು ಮೆಚ್ಚಿಕೊಂಡಿದೆ. ಮಾಧ್ಯಮಗಳೂ ಡ್ರೋಣ್ ದಾಳಿಯನ್ನು ವಿರೋಧಿಸಿ ವರದಿ ಬಿತ್ತರಿಸುತ್ತಿವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಪ್ರಜೆಗಳ ಬೆಂಬಲ: ಇಮ್ರಾನ್ ಖಾನ್ ಆರಂಭಿಸಿರುವ ಶಾಂತಿ ಮೆರವಣಿಗೆಯಲ್ಲಿ ಪಾಕಿಸ್ತಾನದಲ್ಲಿರುವ ಅಮೆರಿಕ ಪ್ರಜೆಗಳೂ ಭಾಗವಹಿಸಿದ್ದು, ಡ್ರೋಣ್ ದಾಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. 32 ಅಮೆರಿಕ ಪ್ರಜೆಗಳು `ಡ್ರೋಣ್ ದಾಳಿಯನ್ನು ನಿಲ್ಲಿಸಿ~ ಎಂಬ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡ್ದ್ದಿದಾರೆ.
ಮೆರವಣಿಗೆಯು ಸಾಗುವ ಮಾರ್ಗಗಳಲ್ಲಿ ಅಲ್ಲಿನ ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಿದೆ.
ಮೆರವಣಿಗೆ ತಡೆ
ಪಾಕಿಸ್ತಾನ ಸೇನೆಯು ಇಮ್ರಾನ್ ಖಾನ್ ನೇತೃತ್ವದ ಎರಡನೇ ಹಂತದ ಮೆರವಣಿಗೆಯನ್ನು ಬುಡಕಟ್ಟು ಪ್ರದೇಶದ ಸಮೀಪದಲ್ಲಿಯೇ ತಡೆ ಹಿಡಿದಿದೆ. ಸೇನೆಯ ಈ ಕ್ರಮದಿಂದ ಪೂರ್ವನಿಗದಿತ ಕೊಟಕಾಯಿ ಗ್ರಾಮದಲ್ಲಿ ನಡೆಯಬೇಕಾಗಿದ್ದ ಬಹಿರಂಗ ಸಭೆಯನ್ನು ರದ್ದುಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.