ತಿಪಟೂರು: ನಗರದ ಕೆರೆ ಪಕ್ಕ ಲಿಂಕ್ ರಸ್ತೆಯಲ್ಲಿ ಬಸ್ ನಿಲ್ದಾಣದ ಕಡೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆ ಕಡೆ ನುಗ್ಗಿದರೂ; ತಂತಿ ಬೇಲಿ ಮತ್ತು ಕಲ್ಲು ತಡೆದಿದ್ದರಿಂದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ.
ಸೋಮವಾರ ಬೆಳಗ್ಗೆ 9ರಲ್ಲಿ ತುರುವೇಕೆರೆಯಿಂದ ಬರುತ್ತಿದ್ದ ಬಸ್ ತಿಪಟೂರು ನಿಲ್ದಾಣ ತಲುಪಲು ಮಾಮೂಲಿ ಮಾರ್ಗವಾದ ಲಿಂಕ್ ರಸ್ತೆಯಲ್ಲಿ ಸಂಚರಿಸುತ್ತಿತ್ತು. ರಸ್ತೆಯಲ್ಲಿದ್ದ ಭಾರಿ ಗುಂಡಿ ದಾಟಿದ ತಕ್ಷಣ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ತುಂಬಿರುವ ಕೆರೆ ಕಡೆ ಬಿರುಸಾಗಿ ನುಗ್ಗಿತು.
ಬಸ್ನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಕೂಗಾಡಿದರು. ಇನ್ನೇನು ಕೆರೆಗೆ ಬಿದ್ದೇ ಬಿಟ್ಟಿತು ಎನ್ನುವಷ್ಟರಲ್ಲಿ ಮುಂದಿನ ತಡೆಬೇಲಿ ಮತ್ತು ಕೆರೆ ಪಕ್ಕದ ತಡೆ ಕಲ್ಲುಗಳು ಹಿಂದಿನ ಚಕ್ರಕ್ಕೆ ಸಿಕ್ಕಿ ಬಸ್ ತಡೆದವು. ಅರ್ಧ ಅಡಿ ದಾಟಿದ್ದರೂ ಬಸ್ ಕೆರೆಗೆ ಬೀಳುತ್ತಿತ್ತು ಎನ್ನುವ ಸ್ಥಿತಿಯಲ್ಲಿ ಬಸ್ ನಿಂತು ಅಚ್ಚರಿ ಮೂಡಿಸಿತು. ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಅವರಸದಲ್ಲಿ ಬಸ್ನಿಂದ ಇಳಿದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಬ್ಬಿಣದ ತಂತಿ ಬೇಲಿ ತುಂಡಾಗಿದೆ. ಸುದ್ದಿ ತಿಳಿದ ಜನ ಕೆರೆ ಬಳಿ ಧಾವಿಸಿ ನೋಡಿ ಆಶ್ಚರ್ಯ ಚಕಿತರಾದರು. ಅಪಘಾತಕ್ಕೆ ಖಚಿತ ಕಾರಣ ತಿಳಿದು ಬಂದಿಲ್ಲ. ಆದರೆ ಚಾಲಕನ ಅಜಾಗರೂಕತೆ ಜತೆಗೆ ರಸ್ತೆಯಲ್ಲಿದ್ದ ಭಾರಿ ಗುಂಡಿಯೂ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಸಣ್ಣ ಪುಟ್ಟ ಗಾಯಗಳಾಗಿದ್ದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನದ ವೇಳೆಗೆ ಬಸ್ ತೆರವುಗೊಳಿಸಲಾಯಿತು.