ಬೆಂಗಳೂರು: ಎತ್ತು ಹಾಗೂ ಎತ್ತಿನ ಬಂಡಿಗಳನ್ನು ತೈಲ ಸಾಗಾಣಿಕೆಗೆ ಬಳಸುತ್ತಿರುವುದನ್ನು ನಿಲ್ಲಿಸಬೇಕೆಂದು ಇಂಡಿಯನ್ ಆಯಿಲ್ ಕಂಪೆನಿಯನ್ನು ಒತ್ತಾಯಿಸಿ ಪೀಪಲ್ಸ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್(ಪೀಟಾ) ಇಂಡಿಯಾ ಸದಸ್ಯರು ಗುರುವಾರ ನಗರದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂದೆ ಧರಣಿ ನಡೆಸಿದರು.
ಮುಂಬಯಿಯಲ್ಲಿ ಹಸುಗಳನ್ನು ಇರಿಸಿಕೊಳ್ಳವುದು ಹಾಗೂ ಸಾಗಿಸುವುದನ್ನು ಮಹಾರಾಷ್ಟ್ರ ಸರ್ಕಾರ 2006ರಲ್ಲಿ ನಿಷೇಧಿಸಿದೆ. ಆದರೂ 500ಕ್ಕೂ ಅಧಿಕ ಎತ್ತುಗಳನ್ನು ನಗರದಾದ್ಯಂತ ಇನ್ನೂ ತೈಲ ಸಾಗಾಣಿಕೆಗೆ ಬಳಸಲಾಗುತ್ತಿದ್ದು, ಇವುಗಳಲ್ಲಿ 270 ಎತ್ತುಗಳನ್ನು ಭಾರತೀಯ ತೈಲ ಕಂಪೆನಿ ಬಳಸಿಕೊಳ್ಳುತ್ತಿದೆ. ಇದರಿಂದಾಗಿ ಅಲ್ಲಿನ ಎತ್ತುಗಳ ದೇಹತೂಕ ಕಡಿಮೆಯಾಗಿದೆ.
ಕೊಳಕು ಜಾಗದಲ್ಲಿ ಅವುಗಳನ್ನು ಸಾಕಲಾಗುತ್ತಿದ್ದು, ಕರುಳಿನ ಸಮಸ್ಯೆ ಸೇರಿದಂತೆ ಹಲವಾರು ಕಾಯಿಲೆಗಳಿಂದ ಬಳಲುತ್ತಿವೆ. ಅಲ್ಲದೇ ಎತ್ತಿನ ಬಂಡಿಗಳ ಮೂಲಕ ತೈಲ ಸಾಗಾಣಿಕೆ ಮಾಡುವುದು ಸುರಕ್ಷಿತವಲ್ಲ. ಇದರಿಂದ ಸಾರ್ವಜನಿಕರಿಗೂ ಅಪಾಯವಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
`ತೈಲ ಸಾಗಾಣಿಕೆಗೆ ಎತ್ತಿನ ಬಂಡಿಗಳ ಉಪಯೋಗವನ್ನು ನಿಷೇಧಿಸುವ ಬಗ್ಗೆ ಸರ್ಕಾರ ಕೇವಲ ಬಾಯಿ ಮಾತಿನ ಮೂಲಕ ಸೇವೆ ಸಲ್ಲಿಸುತ್ತಿದೆ ಹೊರತು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತೈಲ ಸಾಗಿಸಲು ಮೋಟಾರು ಚಾಲಿತ ಬಂಡಿಗಳನ್ನು ಉಪಯೋಗಿಸಲು ತೈಲ ಕಂಪೆನಿಯ ಮೇಲೆ ಸರ್ಕಾರ ಒತ್ತಡ ಹೇರಬೇಕು~ ಎಂದು ಹೋರಾಟಗಾರರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಬ್ಯಾಂಡೇಜು ಸುತ್ತಿದ ಎತ್ತಿನ ಪ್ರತಿಕೃತಿಯನ್ನು ನಿರ್ಮಿಸಿ ಗಾಲಿ ಕುರ್ಚಿಯಲ್ಲಿ ತಂದು ಪ್ರದರ್ಶಿಸಿದರು.