ಕೋಲಾರ: ಮೈದಾನದಲ್ಲಿ ಕಲ್ಲಿನ ಚೂರುಗಳು, ಆಟವಾಡಲು ಹಿಂಜರಿದ ಕ್ರೀಡಾಪಟುಗಳು, ಸ್ಪರ್ಧಿಗಳಿಗೆ ಕಲ್ಲಿನ ಚೂರುಗಳನ್ನು ಆಯುವ ಕೆಲಸ...
-ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮಂಗಳವಾರ ಕಂಡು ಬಂದ ದೃಶ್ಯಾವಳಿಗಳು ಇವು.
ಕೊಕ್ಕೊ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಂದ ಕ್ರೀಡಾಪಟುಗಳಿಗೆ ಅಂಕಣದಲ್ಲಿ ಕಲ್ಲಿನ ಚೂರುಗಳು ಇದ್ದುದು ಕಂಡು ಬಂತು. ಅದರಿಂದ ಕೆಲ ಕಾಲ ಕ್ರೀಡಾಪಟುಗಳು ಆಟವಾಡದೇ ಅಂಕಣದಲ್ಲೆ ಸುಮ್ಮನೆ ಕುಳಿತಿದ್ದರು. ತೀರ್ಪುಗಾರರೂ ಕೂಡ ಅಸಹಾಯಕರಾಗಿ ಕುಳಿತರು.
ಇದೇ ಸಮಯಕ್ಕೆ ಸ್ಥಳಕ್ಕೆ ಬಂದ ಭಾರತ ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಮುಬಾರಕ್ ಅವರು ಅಂಕಣದಲ್ಲಿದ್ದ ಕಲ್ಲುಗಳನ್ನು ಆಯ್ದು ಹೊರಗೆಸೆಯುವಂತೆ ಆಟಗಾರರಿಗೆ ಸಲಹೆ ನೀಡಿದರು. ಬಲೆಯೊಂದನ್ನು ಹಿಡಿದು ತಾವೇ ಮತ್ತೊಬ್ಬರ ಸಹಾಯದಿಂದ ಕಲ್ಲುಗಳನ್ನು ಅಂಕಣದಿಂದ ಹೊರಕ್ಕೆ ಚಿಮ್ಮುವ ಕೆಲಸವನ್ನೂ ಮಾಡಿದರು.
ಅವರ ಪ್ರಯತ್ನಕ್ಕೆ ಆಟಗಾರರೂ ಕೈ ಜೋಡಿಸಿ, ಕಲ್ಲುಗಳನ್ನು ಆಯ್ದು ಹೊರಗೆಸೆದರು. ನಂತರ ಸ್ಪರ್ಧೆಗಳು ಮುಂದುವರಿದವು. ಸೋಮವಾರ ಕೂಡ ಆಟಗಾರರಿಗೆ ಸಮಯಕ್ಕೆ ಸರಿಯಾಗಿ ಊಟ, ಪ್ರಯಾಣ ಭತ್ಯೆಯನ್ನು ನೀಡದೆ ಇದ್ದುದರಿಂದ ನೂಕು ನುಗ್ಗಲು ಉಂಟಾಗಿತ್ತು.