ಬೆಂಗಳೂರು: ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ನೊಂದ ಮಹಿಳೆಯರಿಗೆ ಸಹಾಯಹಸ್ತ ಚಾಚಲು ಸೌಖ್ಯ ಸ್ವಯಂಸೇವಾ ಸಂಸ್ಥೆಯು ಬಿಬಿಎಂಪಿ ಸಹಯೋಗದಲ್ಲಿ ರೂಪಿಸಿದ ನೂತನ ಯೋಜನೆಗೆ ಅಮೆರಿಕ ರಾಯಭಾರ ಕಚೇರಿ ಚೆನ್ನೈ ಕೇಂದ್ರದ ಕಾನ್ಸುಲ್ ಜನರಲ್ ಜೆನ್ನಿಫರ್ ಮೆಕಿಂಟೈರ್ ಸೋಮವಾರ ಚಾಲನೆ ನೀಡಿದರು.
ಕೌಟುಂಬಿಕ ದೌರ್ಜನ್ಯದಿಂದ ನಲುಗಿದ ಮಹಿಳೆಯರನ್ನು ಪತ್ತೆ ಹಚ್ಚಿ, ಆರೋಗ್ಯ ಸೇವೆಯನ್ನು ಒದಗಿಸುವುದು ಯೋಜನೆ ಹಿಂದಿರುವ ಮುಖ್ಯ ಗುರಿಯಾಗಿದೆ. ಆಪ್ತ ಸಮಾಲೋಚನೆ, ಕಾನೂನು ನೆರವು,ಪುನರ್ವಸತಿ ಕಲ್ಪಿಸುವ ಉದ್ದೇಶವನ್ನೂ ಇಟ್ಟುಕೊಳ್ಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸಂತ್ರಸ್ತರನ್ನು ಪತ್ತೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಅದಕ್ಕಾಗಿ ‘ಕಾಮ್ಕೇರ್’ ಸಾಫ್ಟ್ವೇರ್ ರೂಪಿಸಲಾಗಿದೆ. ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಈ ಯೋಜನೆಗಾಗಿ 5 ಲಕ್ಷ ಡಾಲರ್ ಧನಸಹಾಯ ನೀಡುತ್ತಿದೆ. ಸೌಖ್ಯ ಸಂಸ್ಥೆ ಮುಖ್ಯಸ್ಥೆ ಡಾ. ಸುನೀತಾ ಕೃಷ್ಣನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ‘ಕಡಿಮೆ ಆದಾಯದ ಕುಟುಂಬಗಳು ವಾಸಿಸುವ ನಗರದ ಪ್ರದೇಶಗಳಲ್ಲಿ ಪ್ರತಿಶತ 80ರಷ್ಟು ವಿವಾಹಿತ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಆದ್ದರಿಂದಲೇ ಗೃಹಿಣಿಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಈ ಆತಂಕಕಾರಿ ಸಂಗತಿಗಳೇ ನಮ್ಮನ್ನು ಈ ಯೋಜನೆಯಲ್ಲಿ ತೊಡಗುವಂತೆ ಪ್ರೇರೇಪಿಸಿವೆ’ ಎಂದು ವಿವರಿಸಿದರು.
‘ದೌರ್ಜನ್ಯ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಅನುಕೂಲವಾಗಲು ‘ಕಾಮ್ಕೇರ್’ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ನರ್ಸ್ಗಳು ಮೊಬೈಲ್ನಿಂದ ನೊಂದ ಮಹಿಳೆಯರ ಮಾಹಿತಿ ಸೌಖ್ಯ ಸಂಸ್ಥೆಗೆ ರವಾನಿಸುತ್ತಾರೆ. ಸೌಖ್ಯ ಸಂಸ್ಥೆ ಸ್ವಯಂಸೇವಕರು ನೊಂದವರ ಸಹಾಯಕ್ಕೆ ಧಾವಿಸುತ್ತಾರೆ’ ಎಂದರು.
‘ಕಳೆದ 6 ತಿಂಗಳಲ್ಲಿ ಪ್ರಾಯೋಗಿಕವಾಗಿ ನಗರದ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 9 ಘಟಕಗಳನ್ನು ತೆರೆಯಲಾಗಿದೆ. ಈಗಾಗಲೇ 60 ಜನ ಮಹಿಳೆಯರು ಸೌಖ್ಯದ ಸೇವೆ ಪಡೆದಿದ್ದಾರೆ. ಅದರಲ್ಲಿ ಇಬ್ಬರು ಕಾನೂನು ಕ್ರಮಕ್ಕೂ ಮುಂದಾಗಿದ್ದಾರೆ. ಆದರೆ, ದೌರ್ಜನ್ಯ ಕೊನೆಗೊಳ್ಳಬೇಕು. ತಾವು ಕುಟುಂಬದ ಜತೆಯಲ್ಲೇ ವಾಸವಾಗಿರಬೇಕು ಎನ್ನುವ ಅಪೇಕ್ಷೆ ಹೊಂದಿದ್ದಾರೆ’ ಎಂದರು. ‘3 ವರ್ಷಗಳಲ್ಲಿ 113 ಘಟಕ ತೆರೆಯುವ ಉದ್ದೇಶವಿದೆ’ ಎಂದರು.
ಯೋಜನೆಗೆ ಚಾಲನೆ ನೀಡಿದ ಜೆನ್ನಿಫರ್, ‘ಕೌಟುಂಬಿಕ ದೌರ್ಜನ್ಯ ಭಾರತದ ಸಮಸ್ಯೆ ಅಲ್ಲ. ಜಗತ್ತಿನ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರು ಇಂತಹ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅಮೆರಿಕದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ’ ಎಂದರು. ‘ಕೌಟುಂಬಿಕ ದೌರ್ಜನ್ಯವು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ. ಇಂತಹ ಪ್ರಕರಣ ತಡೆಗಟ್ಟುವುದು ಪ್ರಪಂಚದ ಆದ್ಯತೆ ಆಗಬೇಕಿದೆ’ ಎಂದರು.
ಕಾನ್ಸುಲ್ ವಾಹನಕ್ಕೆ ಅಡ್ಡಿ
ಸಮಾರಂಭ ನಡೆದ ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಕಾನ್ಸುಲ್ ಜನರಲ್ ಜೆನ್ನಿಫರ್ ಮೆಕಿಂಟೈರ್ ಅವರ ಇನ್ನೋವಾ ವಾಹನವನ್ನು ನಿಲ್ಲಿಸಲಾಗಿತ್ತು. ತಡವಾಗಿ ಬಂದ ಬಿಬಿಎಂಪಿ ಸದಸ್ಯರು ಆ ವಾಹನದ ಸುತ್ತ ತಮ್ಮ ಕಾರುಗಳನ್ನು ನಿಲುಗಡೆ ಮಾಡಿದ್ದರು. ಯಾವ ಕಡೆಗೂ ಚಲಿಸಲು ಆಗದಂತೆ ನಿಂತಿದ್ದ ತಮ್ಮ ವಾಹನ, ಸುತ್ತಲೂ ಮುತ್ತಿದ ಕಾರುಗಳಿಂದ ಹೊರಬರುವವರೆಗೆ ಜೆನ್ನಿಫರ್ ಕಾಯುತ್ತಾ ನಿಲ್ಲಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.