ಹೈದರಾಬಾದ್ ಕರ್ನಾಟಕ-ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರೈಲು ಇಷ್ಟು ವರ್ಷಗಳಾದರೂ ಇಲ್ಲದೇ ಇರುವುದು ಒಂದು ಕಠೋರ ವಾಸ್ತವವಾಗಿದೆ.
ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್ಲು, ರಾಯಚೂರು, ಯಾದಗಿರಿ, ಗುಲ್ಬರ್ಗ ಮೊದಲಾದ ಕರ್ನಾಟಕದ ಪ್ರಮುಖ ನಗರಗಳನ್ನು ಸಂಪರ್ಕಿಸಲು ರೈಲು ವ್ಯವಸ್ಥೆ ಇಲ್ಲ.
ಈಗ ಹೋಗಬೇಕಾದವರು ಯಾದಗಿರಿಗೆ ಇಳಿದು ಒಂದು ತಾಸು ಇನ್ನೊಂದು ರೈಲಿಗಾಗಿ ದಾರಿ ಕಾಯಬೇಕು. ಇಲ್ಲದಿದ್ದರೆ ಬಸ್ಸುಗಳಲ್ಲಿ ಮೈಬೇನೆ ಮಾಡಿಕೊಂಡು ಸಾಗಬೇಕು.
ಧಾರ್ಮಿಕ ಕಾರಣಕ್ಕೆ ಗುಲ್ಬರ್ಗದ ಶರಣಬಸವೇಶ್ವರ ಗುಡಿಗೋ, ಬಂದೇ ನವಾಜ್ ದರ್ಗಾಕ್ಕೋ ಹೋಗುವವರ, ವಿಶ್ವವಿದ್ಯಾಲಯ, ಆಕಾಶವಾಣಿ, ವ್ಯಾಪಾರ, ವಹಿವಾಟು, ಕೋರ್ಟು, ಕಚೇರಿ ಕೆಲಸಕ್ಕಾಗಿ ಹೋಗುವ ಸಾವಿರಾರು ಜನ ಪಡುವ ಯಾತನೆ ದಿನ ನಿತ್ಯದ ದೃಶ್ಯ. ಈ ಎಲ್ಲ ಜನರು ಬಸ್ ಅಥವಾ ಬೇರೆ ವಾಹನಗಳನ್ನೇ ಅವಲಂಬಿಸಿರುವುದರಿಂದ ರಸ್ತೆ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ.
ಆದ್ದರಿಂದ ಈ ಭಾಗದ ಲೇಖಕರು, ಕವಿಗಳು, ಕಲಾವಿದರು, ಬುದ್ದಿ ಜೀವಿಗಳು, ಸಾರ್ವಜನಿಕರು ಈ ಬೇಡಿಕೆಯನ್ನು ಬೆಂಬಲಿಸಬೇಕು.
ಈ ರೈಲ್ವೆ ಬಜೆಟ್ನಲ್ಲಿಯೇ ಕೇಂದ್ರ ಸರ್ಕಾರವನ್ನು ಈ ಜನಪರ ಬೇಡಿಕೆಯನ್ನು ಈಡೇರಿಸಬೇಕೆಂದು ವಿನಂತಿಸುತ್ತೇವೆ. ಇದಕ್ಕಾಗಿ ಶಾಸಕರು, ಸಂಸದರೂ ಒತ್ತಾಯಿಸಬೇಕೆಂದು ವಿನಂತಿ.
- ರಹಮತ್ ತರೀಕೇರೆ, ಹೊಸಪೇಟೆ ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ