ಮಸ್ಕಿ: ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನವಗ್ರಾಮ ಯೋಜೆಯ ಮನೆಗಳ ಫಲಾನುಭವಿಗಳಿಗೆ ಶಾಸಕ ಪ್ರತಾಪಗೌಡ ಪಾಟೀಲ ಶುಕ್ರವಾರ ಹಕ್ಕುಪತ್ರ ವಿತರಿಸಿದರು.
ಪಟ್ಟಣದ ಲಿಂಗಸುಗೂರು ರಸ್ತೆಯಲ್ಲಿ 2001-02 ರಲ್ಲಿ 150 ಜನ ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಲು ಸರ್ಕಾರ ಭೂಮಿ ಖರೀದಿಸಿ ಸುಮಾರು 50ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದೆ.
ಮನೆ ನಿರ್ಮಿಸಿ ಕೊಡಿ ಇಲ್ಲವೆ ಖಾಲಿ ಜಾಗವನ್ನಾದರು ಹಸ್ತಾಂತರಿಸಿ ಎಂದು ಹಲವು ಬಾರಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಫಲಾನುಭವಿಗಳು ಧರಣಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಾವಿರಾರು ರೂಪಾಯಿ ಬೆಲೆ ಬಾಳುತ್ತಿದ್ದ ನಿವೇಶಗಳಿಗೆ ಈಗ ಲಕ್ಷಾಂತರ ರೂಪಾಯಿ ಬಾಳುತ್ತಿವೆ. ಖಾಲಿ ಜಾಗವನ್ನು ಕೊಡಿ ಎಂದು ಶಾಸಕ ಪ್ರತಾಪಗೌಡ ಪಾಟೀಲರಿಗೆ ಫಲಾನುಭವಿಗಳು ಮೊರೆ ಹೋಗಿದ್ದರು. ಸಾಂಕೇತಿಕವಾಗಿ 11 ಜನರಿಗೆ ಶಾಸಕರು ಹಕ್ಕುಪತ್ರ ವಿತರಿಸಿ ಉಳಿದ ಎಲ್ಲ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವುದಾಗಿ ತಿಳಿಸಿದರು.
ನಾಗಲಾಪುರ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾದೇವಪ್ಪಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮಂತಪ್ಪ ಮೋಚಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಗೋನ್ವಾರ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ, ಮುಖಂಡರು ಭಾಗವಹಿಸಿದ್ದರು. ಡಾ.ದಿವಟರ್ ನಿರ್ವಹಿಸಿದರು.