ಮೈಸೂರು: ಸುಪ್ರೀಂ ಕೋರ್ಟ್ನ ಹಸಿರು ನಿಶಾನೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸೋದ್ಯಮ ಚಟುವಟಿಕೆ `ಹುಲಿ ಸಫಾರಿ~ ಗುರುವಾರ ಪುನರಾರಂಭವಾಗಿದೆ.
ಆದರೆ, ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಬಿಳಿಗಿರಿ ಹುಲಿ ರಕ್ಷಿತಾರಣ್ಯದಲ್ಲಿ ಇನ್ನೂ ಹುಲಿ ಸಫಾರಿ ಆರಂಭವಾಗಿಲ್ಲ. ನಾಗರಹೊಳೆಯಲ್ಲಿ ಒಂದು ವಾರದ ನಂತರ ಪ್ರವಾಸಿಗರಿಗೆ ಪ್ರವೇಶವನ್ನು ನೀಡಲಾಗುತ್ತದೆ. ನಾಲ್ಕು ತಿಂಗಳಿಂದ ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಂಡಿತ್ತು.
ಇದರಿಂದಾಗಿ ಸಫಾರಿ ವಾಹನ ಸಾಗುವ ರಸ್ತೆಯಲ್ಲಿ ಕಳೆ, ಗಿಡಗಳು ಬೆಳೆದು ನಿಂತಿವೆ. ಇದನ್ನು ಸ್ವಚ್ಛಗೊಳಿಸದೆ ಸಫಾರಿ ಅಸಾಧ್ಯ. ಆದ್ದರಿಂದ ಅರಣ್ಯ ಇಲಾಖೆಯು 50 ಮಂದಿ ಗಿರಿಜನರನ್ನು ಗುರುವಾರದಿಂದ ರಸ್ತೆ ಸ್ವಚ್ಛತೆಗೆ ನಿಯೋಜಿಸಿದೆ. ಸ್ವಚ್ಛತೆ ಕಾರಣಕ್ಕಾಗಿ ತಾತ್ಕಾಲಿಕವಾಗಿ ಸಫಾರಿಯನ್ನು ನಿಲ್ಲಿಸಲು ಅನುಮತಿ ಪಡೆದುಕೊಂಡಿದ್ದೇವೆ. ಇನ್ನೊಂದು ವಾರದಲ್ಲಿ ಸಫಾರಿ ಆರಂಭಗೊಳ್ಳುತ್ತದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಂದಪ್ಪ ಪ್ರಜಾವಾಣಿಗೆ ತಿಳಿಸಿದರು. ಗುರುವಾರ ಪ್ರವಾಸಿಗರು ಬಂದಿರಲಿಲ್ಲ.
ಗುಂಡ್ಲುಪೇಟೆ ವರದಿ: ಬಂಡೀಪುರದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎಂದಿನಂತೆ ಈ ಸಫಾರಿ ನಡೆಯಲಿದ್ದು, 5 ಮಿನಿ ಬಸ್ ಹಾಗೂ 2 ಜೀಪ್ಗಳನ್ನು ಒದಗಿಸಲಾಗುವುದು ಎಂದು ಹುಲಿ ಯೋಜನೆ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದ್ದಾರೆ. ಅತಿ ಹೆಚ್ಚು ಹುಲಿಗಳಿರುವ ಬಂಡೀಪುರ ಕಾಡಿನಲ್ಲಿ ಶೇಕಡ 10 ರಷ್ಟು ಪ್ರದೇಶದಲ್ಲಿ ಮಾತ್ರ ಸಫಾರಿ ನಡೆಸಲಾಗುವುದು ಎಂದು ತಿಳಿಸಿದರು.