ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಪ್ರವಾಹ ಪೀಡಿತ ಎಲ್ಲ ಗ್ರಾಮಗಳ ಜನರಿಗೆ ಬರುವ ಜೂನ್ ಅಂತ್ಯದೊಳಗೆ ಆಸರೆ ಮನೆಗಳನ್ನು ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ಭಾನುವಾರ ಆಸರೆ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.ಪ್ರವಾಹ ಪೀಡಿತವಾಗಿರುವ 250 ಗ್ರಾಮಗಳ ಸ್ಥಳಾಂತರಕ್ಕಾಗಿ 65 ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಪೈಕಿ 47674 ಮನೆಗಳನ್ನು ಮಾರ್ಚ್ ಅಂತ್ಯದೊಳಗೆ ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು. ಇನ್ನುಳಿದ ಮನೆಗಳನ್ನು ಜೂನ್ ಅಂತ್ಯದೊಳಗೆ ನೀಡಲಾಗುವುದು ಎಂದು ಅವರು ಹೇಳಿದರು.ಸ್ಥಳಾಂತರಗೊಂಡ ಈ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮುಂಬರುವ ಬಜೆಟ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಮೀಸಲಿಡಲು ತೀರ್ಮಾನ ಕೈಗೊಂಡಿದ್ದೇವೆ ಎಂದೂ ಅವರು ಹೇಳಿದರು.
ಕರ್ನಾಟಕವನ್ನು ಗುಡಿಸಲುರಹಿತ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ.ಬಸವ ವಸತಿ ಯೋಜನೆಯಡಿ 2.96 ಲಕ್ಷ ಮನೆ, ಭಾಗಶಃ ಕೇಂದ್ರದ ಅನುದಾನವಿರುವ ಇಂದಿರಾ ಆವಾಸ ಯೋಜನೆಯಲ್ಲಿ ಒಂದು ಲಕ್ಷ ಮನೆ, ನಗರ ಪ್ರದೇಶದಲ್ಲಿ 50 ಸಾವಿರ ವಾಜಪೇಯಿ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಿದೆ ಎಂದರು.