ಕನಕಪುರ: ಸಮೂಹ ಮಾಧ್ಯಮಗಳ ದಟ್ಟ ಪ್ರಭಾವದಿಂದಾಗಿ ಹವ್ಯಾಸಿ ರಂಗಕಲೆ ಇಂದು ಅಳಿವಿನ ಅಂಚಿಗೆ ಬಂದು ತಲುಪಿದೆ ಎಂದು ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಡಾ.ರಾಜ್ ಬಯಲು ರಂಗಮಂದಿರದಲ್ಲಿ ರಂಗ ಬಾಂದವ್ಯದ ಸಂಸ್ಥಾಪಕ ದಿ. ಎಂ.ಸಿ.ರಾಮಕೃಷ್ಣಪ್ಪ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಸೂರ್ಯಪುತ್ರ ಕರ್ಣ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೆ ಜನರಿಗೆ ಮನರಂಜನೆಯ ಏಕೈಕ ಕೇಂದ್ರವಾಗಿದ್ದ ನಾಟಕಗಳು ಇಂದು ನೇಪಥ್ಯಕ್ಕೆ ಸರಿಯುತ್ತಿವೆ.ರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ ಸಹ ನೀಡುತ್ತಿದ್ದ ನಾಟಕಗಳು ಮಾಧ್ಯಮಗಳ ಪ್ರಭಾವದಿಂದ ಇಂದು ಸೊರಗುತ್ತಿವೆ.ಬದಲಾದ ಸನ್ನಿವೇಶದಲ್ಲಿ ರಂಗಭೂಮಿ ಕಲಾವಿದರು ನಗಣ್ಯರಾಗುತ್ತಿದ್ದಾರೆ ಎಂದರು.
ದೃಶ್ಯ ಮಾಧ್ಯಮಗಳ ಪೈಪೋಟಿ ನಡುವೆಯೂ ರಂಗಬಾಂದವ್ಯ ತಂಡ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರಂಗಕಲೆ ಉಳಿಸಲು ಶ್ರಮಿಸುತ್ತಿದೆ. ನಾಟಕ ಕಲೆಯನ್ನು ಪೋತ್ಸಾಹಿಸುವ ಸಂಘ ಸಂಸ್ಥೆಗಳನ್ನು ಉತ್ತೇಜಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದರು.
ದೇಗುಲಮಠದ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹೆಸರಾಂತ ರಂಗಭೂಮಿ ಕಲಾವಿದ ಮತ್ತು ನಿರ್ದೇಶಕ ಯಶವಂತ ಸರ್ ದೇಶಪಾಂಡೆ ಅವರನ್ನು ರಂಗಬಾಂದವ್ಯ ಪೋಷಕ ಕೆ.ಆರ್.ಕಾಂತರಾಜು ಸನ್ಮಾನಿಸಿದರು.
ಮುಖ್ಯ ಅಥಿತಿಗಳಾಗಿ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಬಿ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯ್ದೇವ್, ಜೆಡಿಎಸ್ ಮುಖಂಡ ನಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮುನಿರಾಜು, ಕರ್ನಾಟಕ ಸಂಘದ ಅಧ್ಯಕ್ಷ ಮರಳವಾಡಿ ಉಮಾಶಂಕರ್ ಮತ್ತಿತರರು ಹಾಜರಿದ್ದರು.ಸಂಚಾಲಕ ಜಗದೀಶ್ವರಾಚಾರ್ಯ ಸ್ವಾಗತಿಸಿದರು. ಸಿ.ರವೀಂದ್ರ ನಿರೂಪಿಸಿದರು. ಡಿ.ಎಸ್.ಸತೀಶ್ ವಂದಿಸಿದರು.