ದೊಡ್ಡಬಳ್ಳಾಪುರ: ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡರೆ ಮಾತ್ರ ರೈತರ ಬದುಕು ಮತ್ತು ಭೂಮಿ ಉಳಿಯಲು ಸಾಧ್ಯ ಎಂದು ಶ್ರೀಲಂಕಾ ದೇಶದ ರೈತ ಮುಖಂಡ ಷರದ್ಫರ್ನಾಂಡೋ ಹೇಳಿದರು.ತಾಲ್ಲೂಕಿನ ನಾಗಸಂದ್ರದಲ್ಲಿ ಮಂಗಳವಾರ ನಡೆದ ದಕ್ಷಿಣ ಏಷ್ಯಾ ರಾಷ್ಟ್ರಗಳ ರೈತ ಮುಖಂಡರ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸಣ್ಣ ಮತ್ತು ದೊಡ್ಡ ಹಿಡುವಳಿದಾರ ರೈತರು ಒಗ್ಗೂಡುವ ಮೂಲಕ ಹೊಸ ರೈತ ಜಗತ್ತನ್ನು ಸೃಷ್ಟಿಸಬೇಕು.ಇಂದಿನ ಕೃಷಿ ಬಹುರಾಷ್ಟ್ರೀಯ ಕಂಪೆನಿಗಳ ಕಪಿಮುಷ್ಠಿಗೆ ಒಳಗಾಗುತ್ತಿದೆ.ಇದರ ವಿರುದ್ಧ ರೈತರು ಒಗ್ಗೂಡಿ ಹೋರಾಟ ಮಾಡುವ ಅನಿವಾರ್ಯ ಇದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಅಂತರ ರಾಷ್ಟ್ರೀಯ ಕಾರ್ಯದರ್ಶಿ ಚುಕ್ಕಿನಂಜುಂಡಸ್ವಾಮಿ ಮಾತನಾಡಿ, ಜಾಗತೀಕರಣದ ನಂತರ ಜಾರಿಯಾಗುತ್ತಿರುವ ಕೃಷಿ ನೀತಿಗಳ ಕುರಿತು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗಸಂದ್ರ ಹಾಗೂ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಕಾಲ ರೈತ ಸಂಘಟನೆಗಳ ಸಮನ್ವಯ ಸಮಿತಿ ಸಭೆ ನಡೆಯಲಿದೆ.
ಮೊದಲ ದಿನದ ಸಭೆಯಲ್ಲಿ ದಕ್ಷಿಣ ಏಷ್ಯಾದ 8 ರಾಷ್ಟ್ರಗಳ ರೈತ ಮುಖಂಡರು ಹಾಗೂ ನಮ್ಮ ದೇಶದ ವಿವಿಧ ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಸ್ಥಳೀಯ ರೈತರೂ ಸಭೆಯಲ್ಲಿ ಭಾಗವಹಿಸುವ ಮೂಲಕ ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಹೊರ ತಂದಿರುವ ‘ನಮ್ದು’ ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಚಾಲನೆ ನೀಡಿದರು.
ಸಭೆಯಲ್ಲಿ ದೆಹಲಿಯ ರೈತ ಮುಖಂಡ ಯದುವೀರ್ಸಿಂಗ್, ನೇಪಾಳದ ಬಲರಾಂ ಬಂಜ್ಕೋಡ್, ಶಾಂತಮಾನವಿ, ತಮಿಳುನಾಡಿನ ರೈತ ಸಂಘಟನೆಯ ಕಾಳಿಮುತ್ತು, ರಾಜ್ಯ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ವೆಂಕಟನಾರಾಣಪ್ಪ, ಕಾರ್ಯದರ್ಶಿ ಡಾ.ಶ್ರೀನಿವಾಸ್, ತಾ.ಅಧ್ಯಕ್ಷ ಪ್ರಸನ್ನ, ಗ್ರಾ.ಪಂ. ಸದಸ್ಯ ಎಸ್.ಸೋಮಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.