ಬಂಗಾರಪೇಟೆ: ಮರಗಿಡ ಬೆಳೆಸಿ, ಪರಿಸರ ಉಳಿಸಿ, ಸ್ವಚ್ಛತೆ ಕಾಪಾಡಿ ಉತ್ತಮ ಆರೋಗ್ಯ ಹೊಂದಿರಿ...
ಇಂಥ ಹಲವು ಘೋಷಣೆ ಫಲಕಗಳನ್ನು ಹೊತ್ತ ಜಾಗೃತಿ ಮೆರವಣಿಗೆ ಪಟ್ಟಣದಲ್ಲಿ ಶುಕ್ರವಾರ ಸಾರ್ವಜನಿಕರ ಗಮನ ಸೆಳೆಯಿತು. ಸ್ವಚ್ಛತೆ ಮತ್ತು ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಬಗ್ಗೆ ಫಲಕಗಳನ್ನು ಪ್ರದರ್ಶಿಸಿದರು.
ಪಟ್ಟಣದ ಗೌತಮ್ ನಗರದ ವಸತಿ ಶಾಲೆಯಿಂದ ಪ್ರಾರಂಭವಾದ ಮೆರವಣಿಗೆ ನಂದಿ ಮೆಡಿಕಲ್ಸ್, ಬಜಾರ್ ರಸ್ತೆ ಮೂಲಕ ಬಸ್ ನಿಲ್ದಾಣಕ್ಕೆ ತಲುಪಿತು. ನಂತರ ಪರಿಸರ ಸಂರಕ್ಷಣೆ ಕುರಿತು ಪುರಸಭೆ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಆತ್ಮ ವಿಶ್ವಾಸ ವೇದಿಕೆ, ಗೌತಮ್ ನಗರದ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳ ವತಿಯಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು.
ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಎನ್.ಭಾರದ್ವಾಜ್, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಸುಮಾರಾಣಿ, ಶಿಕ್ಷಕ ಮುದುಗುಳಿ ಕುಮಾರ್, ವಾರ್ಡನ್ ವರಲಕ್ಷ್ಮಮ್ಮ, ರಾಮಕೃಷ್ಣಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಮರ್ದಾನ ಅಲಿ ಬಳಿಗಾರ, ಕಂಪ್ಯೂಟರ್ ತರಬೇತಿ ಶಿಕ್ಷಕ ಮಂಜುನಾಥ್ ಇದ್ದರು.