ಚಿಕ್ಕಮಗಳೂರು: ಜಮೀನಿನ ದಾಖಲೆಗಳಲ್ಲಿ ಪಹಣಿ ಮುಖ್ಯವಾದುದು. ಅದರಲ್ಲಿ ನಮೂದಾಗಿರುವ ವಿವರಗಳು ವಾಸ್ತವಿಕವಾಗಿರಬೇಕೆಂದು ಜಿಲ್ಲಾಧಿಕಾರಿ ಅಂಜನ್ ಕುಮಾರ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಾಂಖ್ಯಿಕ ಇಲಾಖೆ ವತಿಯಿಂದ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶುಕ್ರವಾರ ಆಯೋಜಿಸಿದ್ದ ಕೃಷಿ ಅಂಕಿ ಅಂಶಗಳ ಮಹತ್ವದ ಅರಿವು ಮೂಡಿಸುವ ಪುನರ್ ಮನನ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಹಣಿ ದಾಖಲೆಯಲ್ಲಿ ಬರೆದಿರುವ ಬೆಳೆ ವಿವರ, ವಿಸ್ತೀರ್ಣದ ವಿವರ ಹಾಗೂ ಇನ್ನಿತರೆ ವಿವರಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ತಪ್ಪಿಲ್ಲದೇ ನಮೂದಿಸಿರುವುದರಿಂದ ರೈತಾಪಿ ವರ್ಗದವರಿಗೆ ಅನುಕೂಲ ಹಾಗೂ ಸರಳವಾಗಿರುತ್ತದೆ ಎಂದ ಅವರು ವಸ್ತುಸ್ಥಿತಿ ಅರಿತು ನಮೂದಿಸಬೇಕೆಂದರು.
ಕಂದಾಯ, ತೋಟಗಾರಿಕೆ, ಕೃಷಿ, ಜಲಾನಯನ, ಸಾಂಖಿಕ ಇಲಾಖೆ ಸಹಯೋಗದೊಂದಿಗೆ ದಾಖಲಾತಿ ಪ್ರಕ್ರಿಯೆ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕೆಂದರು.
ಕೃಷಿ ಅಂಕಿ ಅಂಶಗಳು ರಾಜ್ಯದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು, ಕೃಷಿ ಉತ್ಪಾದನಾ ಮಟ್ಟ ತಿಳಿಯಲು ಸಹಕಾರಿಯಾಗಲಿದೆ ಎಂದರು.
ತಹಶೀಲ್ದಾರ್ ವೀಣಾ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಪಹಣಿ ದಾಖಲೆ ಪ್ರಮುಖವಾಗಿದೆ. ನಿರ್ದಿಷ್ಟಾವಧಿಯಲ್ಲಿ ನಿಖರ ಬೆಳೆ ಮತ್ತಿತರ ವಿವರ ನಮೂದಿಸಬೇಕೆಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಸ್.ಎನ್.ವೆಂಕಟೇಶ್, ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಪತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.