ಮೈಸೂರು: ಬೆಂಗಳೂರಿನ ಅರ್. ಪಾರ್ಥಸಾರಥಿ ಮತ್ತು ಧರ್ಮಸ್ಥಳದ ಶಾಬ್ದಿಕ್ ವರ್ಮಾ ಅವರು ಮೈಸೂರು ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಕಾವೇರಿ ಶಾಲೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ 15 ವರ್ಷದೊಳಗಿನವರ ಬಾಲಕರ ಚಾಂಪಿಯನ್ಷಿಪ್ನಲ್ಲಿ ಶನಿವಾರ ತಲಾ 4.5 ಅಂಕ ಗಳಿಸಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ.
ಐದನೇ ಸುತ್ತಿನಲ್ಲಿ ಆರ್. ಪಾರ್ಥಸಾರಥಿ ಅವರು ಮಂಗಳೂರಿನ ವಿವೇಕರಾಜ್ ವಿರುದ್ಧ ಜಯ ಗಳಿಸಿದರು. ನಾಲ್ಕನೇ ಸುತ್ತಿನಲ್ಲಿ ಪಾರ್ಥಸಾರಥಿ ಅವರು ಬೆಂಗಳೂರಿನ ಓಜಸ್ ಕುಲಕರ್ಣಿಯವರೊಂದಿಗಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು.
ಐದನೇ ಸುತ್ತಿನಲ್ಲಿ ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಶಾಬ್ದಿಕ್ ವರ್ಮಾ ಅವರು ಶಿವಮೊಗ್ಗದ ನಿಖಿಲ್ ಉಮೇಶ್ ಅವರನ್ನು ಮಣಿಸಿದರು. ವಿ. ವೃಷಕ್, ಅರ್ಜುನ್ ಆದಪ್ಪ, ಎಸ್.ಎನ್. ಜತಿನ್, ಓಜಸ್ ಕುಲಕರ್ಣಿ, ಸುಹಾಸ್ ನಿಡೋಣಿ, ಸಿ. ಪವನ್, ಎಂ. ತುಳಸಿ ಅವರು ಐದು ಸುತ್ತುಗಳಿಂದ ತಲಾ ನಾಲ್ಕು ಅಂಕಗಳನ್ನು ಗಳಿಸಿದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆಗೆ ಅಂತಿಮ ಮತ್ತು ನಿರ್ಣಾಯಕ ಸುತ್ತಿನ ಪಂದ್ಯಗಳು ನಡೆಯಲಿವೆ.