ಕಾರವಾರ: ಸದಾ ನಾಗರಿಕರ ಸೇವೆ ಮಾಡುತ್ತಿರುವ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕಾಗಿದೆ. ಅವರಿಂದಲೇ ನಾವಿಂದು ಸುರಕ್ಷಿತವಾಗಿದ್ದೇವೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಶ್ರೀಶಾನಂದ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸೇವೆಯಲ್ಲಿದ್ದ ಸಂದರ್ಭದಲ್ಲಿ ಹುತಾತ್ಮರಾದ ಕುಟುಂಬಗಳ ಕಷ್ಟದಲ್ಲಿ ನಾವೂ ನಾವೂ ಪಾಲ್ಗೊಳ್ಳಬೇಕು. ಆ ಕುಟುಂಬಗಳು ಯಾವುದೇ ಸಂದರ್ಭದಲ್ಲಿ ಧೃತಿಗೆಡದಂತೆ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕು ಎಂದ ಅವರು, ಹುತಾತ್ಮರಾಗುವವರ ಸಂಖ್ಯೆ ಶೂನ್ಯಕ್ಕೆ ಇಳಿಯಲಿ ಎಂದು ಪ್ರಾರ್ಥಿಸಿದರು.
ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕೆ ನಾನೇನು ಮಾಡಿದ್ದೇನೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಪಿತೃ, ಗುರು ಮತ್ತು ದೇಶದ ಋಣ. ಈ ಮೂರು ಋಣದಲ್ಲಿ ಮನುಷ್ಯನಿದ್ದಾನೆ. ಈ ಸತ್ಯವನ್ನು ಅರಿತು ನಡೆಯಬೇಕು ಎಂದರು.
ಹಿಂಸೆ ಎಲ್ಲ ದೇಶಕ್ಕೂ ಅಪಾಯಕಾರಿ. ಅದರಲ್ಲೂ ಆಂತರಿಕ ಹಿಂಸೆ ಇನ್ನೂ ಅಪಾಯಕಾರಿ. ನಾವೆಲ್ಲರೂ ಸರಿದಾರಿಯಲ್ಲಿ ಸಾಗಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಸಮಾಜದ ಸಾಂಸ್ಕೃತಿಕ ನೆಲೆಗಟ್ಟು ಭದ್ರಗೊಳ್ಳಬೇಕು ಎಂದು ನ್ಯಾಯಾಧೀಶರು ನುಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ ಗುಡಿಮನಿ ಅವರು ಒಂದು ವರ್ಷದ ಅವಧಿಯಲ್ಲಿ ಹುತಾತ್ಮರಾದ 635 ಪೊಲೀಸ್ ಕಾನ್ಸ್ಟೇಬಲ್ ಮತ್ತು ಅಧಿಕಾರಿಗಳ ಹೆಸರು ಓದಿದರು. ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾದ ಯಲ್ಲಾಪುರ ಪಿಎಸ್ಐ ಎಸ್.ವಿ.ಪಾಟೀಲ ಮತ್ತು ಭಟ್ಕಳ ಠಾಣೆಯ ಪೊಲೀಸ್ ಕಾನ್ಸ್ಸ್ಟೆಬಲ್ ಚಂದಪ್ಪ ಲಮಾಣಿ ಕುಟುಂಬ ವರ್ಗದವರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.