ಬೆಂಗಳೂರು: ಪೌರ ನಿಗಮಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲು ಮಾಡುವ ಅಧಿಕಾರ `ಕರ್ನಾಟಕ ಆಸ್ತಿ ತೆರಿಗೆ ಮಂಡಳಿ'ಗೆ ಮಾತ್ರ ಇದೆ ಎಂದು ಆದೇಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಜಾ ಮಾಡಿರುವ ಹೈಕೋರ್ಟ್, ಅರ್ಜಿದಾರರಿಗೆ ರೂ. 30 ಸಾವಿರ ದಂಡ ವಿಧಿಸಿದೆ.
ಮಂಗಳೂರಿನ ವಿನಾಯಕ ಬಾಳಿಗ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ. `ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಕೋರ್ಟ್ನ ಸಮಯ ವ್ಯರ್ಥವಾಗಿದೆ' ಎಂದು ನ್ಯಾಯಪೀಠ ಹೇಳಿದೆ.
ಮಂಗಳೂರು ನಗರ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹ ಮಾಡುತ್ತಿದೆ. ಆದರೆ ಕರ್ನಾಟಕ ಪೌರಾಡಳಿತ ಸಂಸ್ಥೆಗಳ ಕಾಯ್ದೆಗೆ ತಂದ ತಿದ್ದುಪಡಿ ಅನ್ವಯ, `ಕರ್ನಾಟಕ ಆಸ್ತಿ ತೆರಿಗೆ ಮಂಡಳಿ'ಯನ್ನು ಸರ್ಕಾರ ರಚಿಸಬೇಕು. ಮಂಡಳಿಯು ಆಸ್ತಿ ತೆರಿಗೆಯ ಮೌಲ್ಯ ನಿರ್ಧರಿಸಿ, ವಸೂಲು ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು.