ಬೆಂಗಳೂರು: ಭಾರತೀಯ ಸಾಮಗಾನ ಸಭಾ ಫೆಬ್ರುವರಿ 1 ರಿಂದ 5 ರ ವರೆಗೆ `ರಾಗ ಸಂಭ್ರಮ~ ಸಂಗೀತೋತ್ಸವ ಕಾರ್ಯಕ್ರಮವನ್ನು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದೆ.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಆರ್.ಆರ್.ರವಿಶಂಕರ್, `ಸಂಗೀತವನ್ನು ಜನ ಸಾಮಾನ್ಯರಿಗೆ ಮುಟ್ಟಿಸುವ ಉದ್ದೇಶ ಹೊಂದಿರುವ ಸಂಸ್ಥೆ 2010 ರಿಂದ ವಾರ್ಷಿಕ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮೂರನೇ ವರ್ಷದ ಸಂಗೀತೋತ್ಸವ `ರಾಗ ಸಂಭ್ರಮ~ ರಾಗಗಳ ಮೇಲೆಯೇ ಹೆಚ್ಚು ಕೇಂದ್ರೀಕೃತವಾಗಿದ್ದು, ಒಬ್ಬೊಬ್ಬ ಸಂಗೀತಗಾರರೂ ಒಂದೊಂದು ರಾಗವನ್ನು ಒಂದು ಗಂಟೆಗಳ ಕಾಲ ಹಾಡಲಿದ್ದಾರೆ. ಮೂರು ದಿನಗಳ ಉತ್ಸವದಲ್ಲಿ 14 ರಾಗಗಳನ್ನು ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. ಸಂಗೀತ ವಿದ್ವಾಂಸರಾದ ಆರ್.ಕೆ.ಪದ್ಮನಾಭ, ಪಿ.ಉನ್ನಿಕೃಷ್ಣನ್, ನಿತ್ಯಶ್ರೀ ಮಹದೇವನ್, ರುದ್ರಪಟ್ಣಂ ಸೋದರರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ~ ಎಂದರು.
`ಸಂತ ತ್ಯಾಗರಾಜ ಹಾಗೂ ಸಂತ ಪುರಂದರದಾಸರ ಆರಾಧನೆ ಫೆಬ್ರುವರಿ 5 ರಂದು ನಡೆಯಲಿದೆ. ಅಂದು ಹಿರಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಡಾ.ಆರ್.ಕೆ. ಶ್ರೀಕಂಠನ್ ಅವರಿಗೆ `ಸಾಮಗಾನ ಮಾತಂಗ~ ಪ್ರಶಸ್ತಿ ಪ್ರದಾನ ಮಾಡಲಾಗುವುದು~ ಎಂದು ಅವರು ತಿಳಿಸಿದರು.