ರಾಮನಾಥಪುರ: ಮನೆಯೊಳಗೆ ಬೆಂಕಿ ಹತ್ತಿಕೊಂಡು ಮನೆಯಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾದ ಘಟನೆ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಪ್ತಿಯ ದೊಡ್ಡಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ದೊಡ್ಡಳ್ಳಿ ಗ್ರಾಮದ ಬೆಟ್ಟೆಗೌಡರ ಮನೆಯಲ್ಲಿ ಈ ದುರಂತ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೆಟ್ಟೆಗೌಡರು ಮನೆಯವರೂಂದಿಗೆ ತಮ್ಮ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಧ್ಯಾಹ್ನ 1.30ರ ಸುಮಾರಿಗೆ ದೊಡ್ಡೆಗೌಡರ ಮನೆಯಲ್ಲಿ ಹೊಗೆ ಕಾಣಿಸಿಕೂಂಡಿದೆ ಇದನ್ನು ಕಂಡ ನೆರೆಕರೆಯವರು ಬಾಗಿಲು ಒಡೆದು ಬೆಂಕಿ ನಂದಿಸಲು ಯತ್ನಿಸಿದರಾದರು. ಪ್ರಯೋಜನವಾಗದೆ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿದರು.
ಬೆಂಕಿ ಅನಾಹುತದಿಂದ ಮನೆಯಲ್ಲಿ ಸಂಗ್ರಹಿಸಿದ್ದ 80 ಚೀಲ ಬತ್ತ, 25 ಕ್ವಿಂಟಲ್ ರಾಗಿ, ಎರಡು ಬೀರು, 35 ಸಾವಿರ ರೂಪಾಯಿ ನಗದು ಸೇರಿದಂತೆ 8ಲಕ್ಷ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ತಾಹಶೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವೇನು ಹಾಗೂ ನಿಖರವಾಗಿ ಎಷ್ಟು ಹಾನಿಯಾಗಿದೆ ಎಂಬುದು ಅಧಿಕಾರಿಗಳು ವರದಿ ನೀಡಿದ ಬಳಿಕವಷ್ಟೆ ತಿಳಿಯಲಿದೆ.