ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ವರ್ಕ್ಶಾಪ್ ಕಾರ್ಮಿಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ವರ್ಕ್ಶಾಪ್ ಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಿಕೊಡಬೇಕು. 55 ವರ್ಷ ತುಂಬಿದ ಕಾರ್ಮಿಕರಿಗೆ ಮಾಸಿಕ ನಿವೃತ್ತಿವೇತನ ರೂ 2 ಸಾವಿರ ನೀಡಬೇಕು. ಮನೆಕಟ್ಟಿಕೊಳ್ಳಲು ಅಥವಾ ಖರೀದಿಸಲು ರೂ 3.5 ಲಕ್ಷಗಳನ್ನು ಶೇ. 3ರ ಬಡ್ಡಿ ದರದಲ್ಲಿ ನೀಡಬೇಕು. ಅಪಘಾತದಿಂದ ಮರಣ ಹೊಂದಿದವರಿಗೆ ರೂ 2.50 ಲಕ್ಷ ಪರಿಹಾರ ನೀಡಬೇಕು. ಮದುವೆಗೆ ರೂ 20 ಸಾವಿರ ಸಹಾಯಧನ ನೀಡಬೇಕು. ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ರೂ 10 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.
ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಬೇಕು. ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು. ಆಶ್ರಯ ಯೋಜನೆ ಅಡಿ ಮನೆಗಳನ್ನು ನಿರ್ಮಿಸಿಕೊಡಬೇಕು. ವರ್ಕ್ಶಾಪ್ ಕಾರ್ಯ ನಿರ್ವಹಿಸಲು ಅಗತ್ಯವಾದ ಸಾಮಗ್ರಿ ಖರೀದಿಸಲು ರೂ 30 ಸಾವಿರ ನೀಡಬೇಕು. ಬೆಲೆ ಏರಿಕೆ ತಡೆಯಬೇಕು. ರಾಷ್ಟ್ರೀಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪಿಸಬೇಕು. ಸಣ್ಣ ಕೈಗಾರಿಕೆ ಸ್ಥಾಪಿಸುವವರಿಗೆ ರೂ 5 ಲಕ್ಷ ಸಾಲ ನೀಡಬೇಕು. ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
ಜಯದೇವ ವೃತ್ತದಿಂದ ಪ್ರತಿಭಟನಾ ಜಾಥಾ ಹೊರಟು ಜಿಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಧರಣಿ ಗುರುವಾರವೂ ಮುಂದುವರಿಯಲಿದೆ.
ರಾಜ್ಯ ವರ್ಕ್ಶಾಪ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಮೀಲ್ ಆಹಮದ್ ಬಳ್ಳಾರಿ, ಮುಖಂಡರಾದ ಅನಿಸ್ ಪಾಷ, ಕೊಟ್ರಪ್ಪ, ಕೆ.ಎಲ್. ಭಟ್, ಆವರಗೆರೆ ವಾಸು, ಸೈಫುಲ್ಲಾ ಸಾಬ್, ಅಬ್ದುಲ್ ರೆಹಮಾನ್, ಟಿ. ದಾಸಕರಿಯಪ್ಪ, ಶಕುಂತಲಾ ಒಡೆಯರ್, ಮಹಮದ್ ಶಫಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.