ಬೆಂಗಳೂರು: ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಅರ್ಶೀನ್ ಸಯೀದಾ ಸಾದತ್ ಹಾಗೂ ಅನೂಪ್ ಶ್ರೀಧರ್ ಇಲ್ಲಿ ನಡೆಯುತ್ತಿರುವ 76ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಶುಭಾರಂಭ ಮಾಡಿದರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್ನಲ್ಲಿ ಶನಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಶೀನ್ 21-4, 21-16ರಲ್ಲಿ ಬಿಎಸ್ಎನ್ಎಲ್ನ ಜ್ಯೋತಿ ಸ್ವರೂಪ ಅವರನ್ನು ಮಣಿಸಿದರು.
ಇದೇ ವಿಭಾಗದ ಇತರ ಸಿಂಗಲ್ಸ್ ಪಂದ್ಯಗಳಲ್ಲಿ ಸಿಂಧು ಭಾರದ್ವಾಜ್ 21-12, 21-16ರಲ್ಲಿ ದೆಹಲಿಯ ಎನ್. ಅನನ್ಯಾ ಮೇಲೂ, ವರ್ಷಾ ಬೆಲ್ವಾಡಿ 21-19, 24-22ರಲ್ಲಿ ಆಂಧ್ರ ಪ್ರದೇಶದ ವಿ. ಹರಿಕಾ ವಿರುದ್ಧವೂ ಜಯಿಸಿದರು. ಡಬಲ್ಸ್ನಲ್ಲಿ ಕರ್ನಾಟಕದ ಜಿ.ಎಂ. ನಿಶ್ಚಿತಾ- ಮಿಜೊರಾಂನ ಎಲ್. ರಿಂಜುಲಿ ಜೋಡಿ 21-12, 21-11ರಲ್ಲಿ ಹರಿಯಾಣದ ಕೋಮಲ್ ಅಂತಿಲ್-ಎಸ್. ಆರತಿ ಎದುರು ಗೆಲುವು ಸಾಧಿಸಿತು.
ಎರಡನೇ ಸುತ್ತಿಗೆ ಅನೂಪ್: ಯುವ ಆಟಗಾರ ಅನೂಪ್ ಶ್ರೀಧರ್ ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 21-2, 21-7ರಲ್ಲಿ ಎಂಇಜಿಯ ಪರುಶುರಾಮ್ ಜೋಶಿ ಎದುರು ಗೆಲುವು ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದರು.
ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಅಭಿಷೇಕ್ ಯಲಿಗಾರ್ 21-7, 21-7ರಲ್ಲಿ ಆರ್. ಪ್ರಿಯಾನ್ ತಿರುಮಲ ಮೇಲೂ, ಉತ್ತರ ಪ್ರದೇಶದ ಅನುರಾಗ್ ಶರ್ಮ 21-12, 21-19ರಲ್ಲಿ ಕರ್ನಾಟಕದ ವೆಂಕಟೇಶ್ ಪ್ರಸಾದ್ ವಿರುದ್ಧವೂ ಜಯ ಪಡೆದರು.
ಡಬಲ್ಸ್ ವಿಭಾಗದಲ್ಲಿ ಆತಿಥೇಯ ರಾಜ್ಯದ ಅಭಿಜಿತ್ ನಿಂಪಳ್ಳಿ-ಜಗದೀಶ್ ಯಾದವ್ ಜೋಡಿ 21-9, 21-12ರಲ್ಲಿ ಜಮ್ಮು ಮತ್ತು ಕಾಶ್ಮೀರದ ಅವಿನಾಶ್ ಶರ್ಮ-ರಾಹುಲ್ ಶರ್ಮ ಎದುರು ಗೆಲುವು ಸಾಧಿಸಿತು.