ನವದೆಹಲಿ/ ಲಂಡನ್ (ಪಿಟಿಐ): ಅಮೃತಸರದ ಸ್ವರ್ಣ ಮಂದಿರದಲ್ಲಿ ಅವಿತಿದ್ದ ಸಿಖ್ ಭಯೋತ್ಪಾದಕರ ವಿರುದ್ಧ 1984ರಲ್ಲಿ ನಡೆದಿದ್ದ ಬ್ಲೂ ಸ್ಟಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ನಿವೃತ್ತ ಲೆ. ಜ. ಕೆ. ಎಸ್. ಬ್ರಾರ್ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.
78 ವರ್ಷದ ಬ್ರಾರ್ ಅವರಿಗೆ ಝಡ್ ಶ್ರೇಣಿಯ ರಕ್ಷಣೆ ಇದೆ. ಲಂಡನ್ನ ಹೋಟೆಲ್ವೊಂದರ ಮುಂಭಾಗದಲ್ಲಿ ನಾಲ್ವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಬ್ರಾರ್ ಅವರನ್ನು ಇರಿದು ಗಾಯಗೊಳಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬ್ರಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಯಾರು ದಾಳಿ ನಡೆಸಿದರು ಎಂಬ ವಿವರ ಗೊತ್ತಾಗಿಲ್ಲ. ಸುದ್ದಿ ತಿಳಿದ ಕೂಡಲೇ ಲಂಡನ್ನಲ್ಲಿಯ ಭಾರತದ ರಾಯಭಾರ ಕಚೇರಿಯ ಸೇನಾ ಅಧಿಕಾರಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಬ್ರಾರ್ ಮತ್ತು ಅವರ ಪತ್ನಿ ಲಂಡನ್ಗೆ ಖಾಸಗಿ ಭೇಟಿ ನೀಡಿದ್ದು, ಹೈಡ್ ಪಾರ್ಕ್ ಪ್ರದೇಶದ ಹಳೆ ಕ್ಯುಬೆಕ್ ಬೀದಿಯಲ್ಲಿರುವ ಹೋಟೆಲ್ನಿಂದ ಹೊರಗೆ ಬರುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದರು. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಕಾಟ್ಲೆಂಡ್ ಪೊಲೀಸರು ತಿಳಿಸಿದ್ದಾರೆ.
ಕೃಷ್ಣ ವಿಚಾರಣೆ: ನ್ಯೂಯಾರ್ಕ್ನಲ್ಲಿರುವ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ಸುದ್ದಿ ತಿಳಿದ ಕೂಡಲೇ ಲಂಡನ್ನಲ್ಲಿರುವ ಭಾರತದ ರಾಯಭಾರಿ ಜೆ. ಭಗವತಿ ಅವರನ್ನು ಸಂಪರ್ಕಿಸಿ ಬ್ರಾರ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.