ಕೊಳ್ಳೇಗಾಲ: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹೊಸ ವರ್ಷಾಚರಣೆಯನ್ನು ಲಕ್ಷಾಂತರ ಭಕ್ತರು ಶ್ರದ್ಧಾಭಕ್ತಿಗಳಿಂದ ದೇವಾಲಯದ ಆವರಣದಲ್ಲಿ ನೆರೆದು ಪೂಜೆ ಸಲ್ಲಿಸಿ ಮಧ್ಯರಾತ್ರಿ ವೇಳೆ ವಿಶೇಷವಾಗಿ ಪಟಾಕಿ ಸಿಡಿಸುವ ಮೂಲಕ ಶನಿವಾರ ಆಚರಿಸಿದರು.
ಹೊಸ ವರ್ಷವನ್ನು ಮಲೆ ಮಹದೇಶ್ವರನಿಗೆ ಹರಕೆ ತೀರಿಸುವ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೂತನ ವರ್ಷ ತಮ್ಮೆಲ್ಲ ಕಾರ್ಯಗಳ ಯಶಸ್ಸಿಗೆ ಶುಭಕೋರಲು ಶನಿವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದರು.
ಹೊಸ ವರ್ಷಾಚರಣೆಗೆ ಬಂದಿರುವ ಭಕ್ತರಿಗೆ ಪೂಜೆ ಸಲ್ಲಿಸಲು ದೇವಾಲಯದ ಆಡಳಿತ ಮಂಡಳಿ ರಾತ್ರಿ 1.30 ಗಂಟೆವರೆಗೂ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು ಅಲ್ಲದೆ ಬೆಳಗಿನ ಜಾವ 3 ಗಂಟೆಗೆ ಅಭಿಷೇಕ ಪೂಜೆ ಪ್ರಾರಂಭಿಸಲಾಗಿತ್ತು.
ಭಕ್ತರಿಗಾಗಿ ರಾತ್ರಿ 1 ಗಂಟೆವರೆಗೂ ನಿರಂತರವಾಗಿ ಅನ್ನದಾಸೋಹ ನಡೆಸಲಾಯಿತು. ಭಕ್ತರಿಗೆ ಕುಡಿಯುವ ನೀರು ವ್ಯವಸ್ಥೆ, ಮತ್ತು ಸರತಿ ಸಾಲಿನಲ್ಲಿ ನಿಂತು ನೂಕುನುಗ್ಗಲಾಗದಂತೆ ದೇವರ ದರ್ಶನ ಪಡೆಯಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಮಲೆ ಮಹದೇಶ್ವರ ಬೆಟ್ಟದ ಆಡಳಿತಾಧಿಕಾರಿ ಜಯವಿಭವಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಎನ್. ರಾಮಮೂರ್ತಿ, ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಎಂ. ಕುಮಾರಸ್ವಾಮಿ ರಾತ್ರಿಯಿಡೀ ಭಕ್ತರಿಗೆ ಅಗತ್ಯ ಸೌಲಭ್ಯದ ಬಗ್ಗೆ ಖುದ್ದಾಗಿ ಎಲ್ಲೆಡೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡಿದ್ದರು.
12 ಗಂಟೆಯಾಗುತ್ತಿದ್ದಂತೆಯೇ ಭಕ್ತರು ಪಟಾಕಿಗಳನ್ನು ಸಿಡಿಸುವ ಮೂಲಕ ಹೊಸ ವರ್ಷ ಸ್ವಾಗತಿಸಿದ ಪರಿ ವಿಶೇಷ ಎಲ್ಲರ ಗಮನ ಸೆಳೆಯಿತು.
ಭಾನುವಾರ ಮುಂಜಾನೆ ಭಕ್ತರು ದೇವಾಲಯಕ್ಕೆ ಆಗಮಿಸಿ ಹೊಸ ವರ್ಷದ ವಿಶೇಷ ಪೂಜೆಗಳನ್ನು ಸಲ್ಲಿಸಿ ಹರಕೆಗಳನ್ನು ತೀರಿಸಿದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.