ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಸಿದ್ಧತಾ ಕಾರ್ಯಗಳನ್ನು ಮಾರ್ಚ್ 5ರೊಳಗೆ ಪೂರ್ಣಗೊಳಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದಲ್ಲಿರುವ ವಿಶ್ವ ಕನ್ನಡ ಸಮ್ಮೇಳನ ಕಚೇರಿಯಲ್ಲಿ ಮಂಗಳವಾರ ಜರುಗಿದ ಸಮ್ಮೇಳನ ಪೂರ್ವಸಿದ್ಧತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ‘ಹಗಲಿರುಳು ಎನ್ನದೇ ಕೆಲಸ ಮಾಡಬೇಕು. ಮಾ.5ಕ್ಕೆ ನಗರವು ಸಮ್ಮೇಳನಕ್ಕೆ ಸಿದ್ಧವಾಗಬೇಕು’ ಎಂದರು.
ಸಭೆಗೆ ಗೈರು ಹಾಜರಾದ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಅಗ್ನಿಶಾಮಕ ದಳ ಅಧಿಕಾರಿಗಳ ವರ್ತನೆ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾವೇನು ಇಲ್ಲಿ ಆಟ ಆಡಲಿಕ್ಕೆ ಬಂದಿದ್ದೇವೆಯೇ? ಸರ್ಕಾರದ ಮಾರ್ಯದೆ ಪ್ರಶ್ನೆ ಇದೆ. ಕ್ಲರ್ಕ್ ಕಳುಹಿಸಿದರೆ ಹೇಗೆ ಎಂದು ಕಿಡಿ ಕಾರಿದರು.ಸಮ್ಮೇಳನ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು, ‘ಅಧಿಕಾರಿಗಳನ್ನು ಅಮಾನತು ಮಾಡುವಂತೆ ದೂರವಾಣಿ ಮೂಲಕವೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ’ ಸೂಚಿಸಿದರು
ಲೋಕೋಪಯೋಗಿ, ಮಹಾನಗರಪಾಲಿಕೆಗಳಿಗೆ ಒಪ್ಪಿಸಿದ್ದ ಕಾಮಗಾರಿಗಳ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.ಕುಸ್ತಿ, ಸೈಕ್ಲಿಂಗ್, ಮಲ್ಲಕಂಬ, ಮ್ಯಾರಾಥಾನ್ ಕ್ರೀಡೆ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಕ್ರೀಡಾ ಇಲಾಖೆ ಅಧಿಕಾರಿ ತಿಳಿಸಿದರು. ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಆಹ್ವಾನ ನೀಡಲಾಗಿದೆ ಎಂದು ಪ್ರಶ್ನಿಸಿದರು.ಸಂಪರ್ಕಿಸಲಾಗುವುದು ಎಂಬ ಉತ್ತರಕ್ಕೆ, ಈಗಾಗಲೇ ವಿಳಂಬವಾಗಿದೆ. ಮೊದಲು ಆ ಕೆಲಸ ಮಾಡಿರಿ ಎಂದು ಸೂಚಿಸಿದ ಸಚಿವರು, ತೀವ್ರಗತಿಯಲ್ಲಿ ಕೆಲಸಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಜಲ ಮಂಡಳಿ, ಕೈಗಾರಿಕೆ, ಪುಸ್ತಕ ಪ್ರದರ್ಶನ, ತೋಟಗಾರಿಕೆ, ಪ್ರಾದೇಶಿಕ ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಒಪ್ಪಿಸಿದ ಕೆಲಸ ಪ್ರಗತಿ ವಿವರವನ್ನು ಅಧಿಕಾರಿಗಳಿಂದ ಸಚಿವ ಗೋವಿಂದ ಕಾರಜೋಳ ಪಡೆದುಕೊಂಡರು.ಸಚಿವ ಲಕ್ಷ್ಮಣ ಸವದಿ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಸಂಜಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿ.ಪಂ. ಅಧ್ಯಕ್ಷ ಈರಪ್ಪ ಕಡಾಡಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಐಜಿಪಿ ಪಿ.ಎಸ್. ಸಂಧು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.