ಮೈಸೂರು: ಕಾವೇರಿ, ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಾಯೋಗಿಕ ಮೋಡ ಬಿತ್ತನೆ ಕಾರ್ಯ ಶನಿವಾರ ಆರಂಭಗೊಂಡಿತು.
ಮೈಸೂರು ವಿಮಾನ ನಿಲ್ದಾಣದಿಂದ ಪೈಪರ್ ಶಯನ್ ವಿಮಾನ ಮೋಡ ಬಿತ್ತನೆಯನ್ನು ಆರಂಭಿಸಿದೆ. ಮೈಸೂರಿನಿಂದ ಬೆಂಗಳೂರು ತನಕ ಹಾಗೂ ಮೇಕೆದಾಟು ಸೇರಿದಂತೆ ಕಾವೇರಿ ಕಣಿವೆಯಲ್ಲಿ ಮೋಡ ಬಿತ್ತನೆ ನಡೆಯಲಿದೆ. ಮುಂಬರುವ ದಿನಗಳಲ್ಲಿ ಮೋಡಗಳ ರಚನೆಯನ್ನು ಆಧರಿಸಿ ಬಿತ್ತನೆ ನಡೆಯಲಿದೆ.
`ಮೋಡಗಳ ಆವಿ ಸಾಂದ್ರೀಕರಿಸಿ ದ್ರವ ರೂಪದಲ್ಲಿ ಭೂಮಿಗೆ ಸುರಿಸುವ ಪ್ರಕ್ರಿಯೆಯೇ ಮೋಡ ಬಿತ್ತನೆ. ಮಳೆ ಮೋಡಗಳು ಲಭ್ಯವಾಗದೇ ಇದ್ದರೆ ಬಿತ್ತನೆ ಸಾಧ್ಯವಾಗುವುದಿಲ್ಲ. ಶನಿವಾರ ಒಳ್ಳೆಯ ಮಳೆಯಾಗಿದೆ. ಇದರಲ್ಲಿ ಶೇ 20 ರಿಂದ 25 ರಷ್ಟು ಮೋಡ ಬಿತ್ತನೆಯ ಪಾಲು ಇರಬಹುದು.
ಮಳೆ ಸುರಿಯುವ ನೈಸರ್ಗಿಕ ವಿದ್ಯಮಾನವನ್ನು ಈ ತಂತ್ರಜ್ಞಾನದ ಮೂಲಕ ಕೃತಕವಾಗಿ ಮಾಡಲಾಗುತ್ತದೆ~ ಎಂದು ಅಗ್ನಿ ಏವಿಯೇಷನ್ನ ಮುಖ್ಯ ಪೈಲಟ್ ಕ್ಯಾಪ್ಟನ್ ಅರವಿಂದ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.
`ಪ್ರಾಯೋಗಿಕ ಮೋಡ ಬಿತ್ತನೆ ಭಾನುವಾರ ಹಾಗೂ ಸೋಮವಾರ ಮುಂದುವರಿಯಲಿದ್ದು, ಹಿಂಗಾರು ಮಳೆ ಮುಕ್ತಾಯವಾಗುವ ವರೆಗೆ ಇದನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ.
ಡಿಸೆಂಬರ್ ಮೊದಲ ವಾರದ ವರೆಗೆ ಮಾತ್ರ ಮಾರುತಗಳು ಬರುತ್ತವೆ, ಅಲ್ಲಿಯ ತನಕ ಮೋಡ ಬಿತ್ತನೆಗೆ ಸಮಸ್ಯೆ ಇರುವುದಿಲ್ಲ. ಪ್ರತಿ ದಿನ ಬೆಳಿಗ್ಗೆಯಿಂದ ಸೂರ್ಯಾಸ್ತದ ವರೆಗೆ ಮೋಡ ಬಿತ್ತನೆ ಮಾಡಲು ವಿಮಾನ ತಯಾರಾಗಿ ನಿಂತಿದೆ.
ಆದರೆ, ಮಳೆ ಮೋಡಗಳು ಸಿಗುತ್ತವೆ ಎಂಬ ಭರವಸೆ ಇಲ್ಲ. ಸುರಕ್ಷತೆಯ ಕಾರಣಕ್ಕಾಗಿ ರಾತ್ರಿ ಹೊತ್ತು ಈ ಪ್ರಕ್ರಿಯೆ ಮಾಡಲು ಸಾಧ್ಯವಾಗದು~ ಎಂದು ಹೇಳಿದರು.