ಬೆಂಗಳೂರು: ಜನವರಿ 6 ರಿಂದ ಆರಂಭಗೊಂಡಿರುವ, 18 ರಿಂದ 25 ವರ್ಷದೊಳಗಿನ 60 ಜನ ಯುವಕರು ಪಾಲ್ಗೊಂಡಿರುವ ಹತ್ತು ದಿನಗಳ `ನಾಯಕತ್ವ ಪ್ರಯಾಣ~ ಶುಕ್ರವಾರ ಬೆಂಗಳೂರು ತಲುಪಿದೆ. ಶನಿವಾರ ಬೆಂಗಳೂರಿನ ಇಸ್ಕಾನ್ ಮತ್ತು ತೇಜಸ್ ನೆಟ್ವರ್ಕ್ಗೆ ಭೇಟಿ ನೀಡಿದ ತಂಡ ಅಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿತು.
ಹೊಸ ಕನಸುಗಳನ್ನು ಹೊತ್ತು ಹೊರಟಿರುವ ಯುವಕರ ತಂಡ ರಾಜ್ಯದ ಧಾರವಾಡ, ಸಾಗರ, ಆಗುಂಬೆ, ಶೃಂಗೇರಿ, ಧರ್ಮಸ್ಥಳ, ಮಣಿಪಾಲ, ಮೈಸೂರು ಹಾಗೂ ಆಂಧ್ರ ಪ್ರದೇಶದ ಕುಪ್ಪಂನ ಪ್ರಯಾಣ ಮುಗಿಸಿ ಬೆಂಗಳೂರಿಗೆ ಬಂದಿದೆ. ಪ್ರವಾಸದ ಸಮಯದಲ್ಲಿ ವೀರೇಂದ್ರ ಹೆಗ್ಗಡೆ, ಶಾಸಕ ಪ್ರಭಾಕರ ಕೋರೆ ಮುಂತಾದವರನ್ನು ತಂಡ ಭೇಟಿಯಾಗಿದೆ. ಭಾನುವಾರ ದೊಡ್ಡಬಳ್ಳಾಪುರದ ಸಾವಯವ ಕೃಷಿಕ ಡಾ.ಎಲ್.ನಾರಾಯಣ ರೆಡ್ಡಿ ಅವರಿಂದ ಸಾವಯವ ಕೃಷಿಯ ಬಗ್ಗೆ ತಿಳಿದುಕೊಳ್ಳುವ ಯುವಕರ ತಂಡ, ಸಂಜೆ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಗೌರವಾಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದೆ.
ಪ್ರಯಾಣದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶ ತಂಡದ್ದಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯಲ್ಲಿ ಪ್ರಯಾಣ ಮುಕ್ತಾಯಗೊಳ್ಳಲಿದೆ.