ಖಾನಾಪುರ: ಕಬ್ಬಿನ ಬೆಲೆ ನೀಡಿಕೆಯಲ್ಲಿ ಹೇಳಿಕೆ ಖಂಡಿಸಿ ಇದೇ 4ರಂದು ಬೆಳಗಾವಿ ಸುವರ್ಣಸೌಧದ ಎದುರು ರೈತರ ವಿರಾಟ ಶಕ್ತಿ ಪ್ರದರ್ಶನ ಹಮ್ಮಿಕೊಂಡಿದೆ ಎಂದು ರೈತ ಸಮುದಾಯ ಬೆಂಬಲಿಸಬೇಕೆಂದು ರೈತ ಮುಖಂಡರಾದ ದಶರಥ ಬನೋಶಿ ಹೇಳಿದರು.
ಭಾನುವಾರ ಮಧ್ಯಾಹ್ನ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಜರುಗಿದ ತಾಲ್ಲೂಕಿನ ವಿವಿಧ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ ₨ 2650 ದರ ಘೋಷಿಸಿದ್ದರೂ ಉತ್ತರ ಕರ್ನಾಟಕದ ಕೆಲ ಖಾಸಗಿ ಸಕ್ಕರೆ ಕಾರ್ಖಾನೆಗಳು ತಮಗೆ ಕೇವಲ ₨ 2000 ಮಾತ್ರ ನೀಡಲು ಸಾಧ್ಯವಾಗುತ್ತಿದ್ದು, ಇದಕ್ಕಿಂತ ಹೆಚ್ಚಿಗೆ ದರ ನೀಡಲು ಆಗುವುದಿಲ್ಲ ಎಂದು ಮುನವಳ್ಳಿಯ ರೇಣುಕಾ ಶುಗರ್ಸ್ ಮಾಲೀಕರಾದ ವಿದ್ಯಾ ಮರಕುಂಬಿ ರೈತರಿಗೆ ಸರ್ಕಾರ ನಿಗದಿಪಡಿಸಿದ ದರವನ್ನು ನೀಡಿದರೆ ತಮ್ಮ ಕಾರ್ಖಾನೆಗೆ ನಷ್ಟ ಉಂಟಾಗುತ್ತದೆ ಎಂಬ ನೆಪ ಒಡ್ಡುವ ಮೂಲಕ ಅಪಸ್ವರ ಎತ್ತಿದ್ದಾರೆ. ಖಾಸಗಿ ಕಾರ್ಖಾನೆಗಳ ಈ ರೀತಿಯ ದ್ವಂದ್ವ ನಿಲುವಿನಿಂದ ಕಬ್ಬು ಬೆಳೆಗಾರರು ಗೊಂದಲದಲ್ಲಿದ್ದು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಈ ಪ್ರದರ್ಶನ ಹಮ್ಮಿಕೊಂಡಿದ್ದು ತಾಲ್ಲೂಕಿನ ರೈತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬನೋಶಿ ಮನವಿ ಮಾಡಿದರು.
ಮಲ್ಲಿಕಾರ್ಜುನ ವಾಲಿ, ಜಯವಂತ ನಿಡಲಗಕರ, ಪರಶುರಾಮ ಪಾಖರೆ, ಗುರುಲಿಂಗಯ್ಯ ಹಿರೇಮಠ, ಮಲ್ಲೇಶಿ ಗುರವ, ವಿಠ್ಠಲ ಹಿಂಡಲಕರ, ರಾಯಪ್ಪ ಚಲವಾದಿ ಸಭೆಯಲ್ಲಿದ್ದರು.