ದಾವಣಗೆರೆ: ಕುಶಾಲನಗರದ ಎ.ಆಗಸ್ಟಿನ್, ಭಾನುವಾರ ನಗರದಲ್ಲಿ ಮುಕ್ತಾಯಗೊಂಡ ರಾಜ್ಯ ಮಟ್ಟದ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಎರಡನೇ ಶ್ರೇಯಾಂಕದ ಆಗಸ್ಟಿನ್ 9 ಸುತ್ತುಗಳಿಂದ ಒಟ್ಟು ಎಂಟು ಪಾಯಿಂಟ್ಸ್ ಸಂಗ್ರಹಿಸಿದರು.
ನಗರದ ಬಿಐಇಟಿ ಕ್ಯಾಂಪಸ್ನಲ್ಲಿ ವಿಝ್ ಕಿಡ್ಸ್ ಚೆಸ್ ಅಕಾಡೆಮಿ ಆಶ್ರಯದಲ್ಲಿ ನಡೆದ ಎರಡು ದಿನಗಳ ಈ ಟೂರ್ನಿಯಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿ ಲಿಖಿತ್ ಚಿಲ್ಕುರಿ ಎರಡನೇ ಸ್ಥಾನ ಪಡೆದರು. ಲಿಖಿತ್ ಕೂಡ ಎಂಟು ಪಾಯಿಂಟ್ಸ್ ಸಂಗ್ರಹಿಸಿದರೂ ಕಡಿಮೆ ಟೈಬ್ರೇಕ್ ಸ್ಕೋರ್ನಿಂದಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಈ ಹಿಂದೆ, ರಾಜ್ಯದ ವಿವಿಧ ವಯೋವರ್ಗ ಚಾಂಪಿಯ ನ್ಷಿಪ್ಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಅನುಭವಿ ಆಗಸ್ಟಿನ್, ಅಗ್ರಸ್ಥಾನಕ್ಕಾಗಿ ಟ್ರೋಫಿ ಮತ್ತು ₨ 5000 ಬಹುಮಾನ ಪಡೆದರೆ, ಲಿಖಿತ್, ಟ್ರೋಫಿ ಜೊತೆಗೆ ₨ 4000 ಬಹುಮಾನ ಜೇಬಿಗಿಳಿಸಿದರು.
ಶಿರಸಿಯಲ್ಲಿ ಅಂಚೆ ಇಲಾಖೆ ಉದ್ಯೋಗಿಯಾಗಿರುವ ಸಂತೋಷ್ ಎಂ.ಭಂಡಾರಿ, ಮೈಸೂರಿನ ವಿದ್ಯಾರ್ಥಿ ಗಳಾದ ಕೇದಾರ್ ಉಮೇಶ್ ವಝೆ, ಅರ್ಜುನ್ ಪ್ರಭು, ಶಿವಮೊಗ್ಗದ ಚಿರಂ ತ್ ಎಂ.ಡಿ., ಬೆಂಗಳೂರಿನ ಶ್ರೀಪಾದ್ ಕೆ.ವಿ. ತಲಾ ಏಳು ಪಾಯಿಂಟ್ಸ್ ಸಂಗ್ರಹಿಸಿದ್ದು, ಮೂರರಿಂದ ಏಳರ ವರೆಗಿನ ಸ್ಥಾನಗಳನ್ನು ಗಳಿಸಿದರು. ಬಳ್ಳಾ ರಿಯ ಬಿ.ವಿ.ನಾಗರಾಜ್, ಮೈಸೂರಿನ ತುಳಸಿ ಎಂ. ಮತ್ತು ಶಿವಮೊಗ್ಗದ ರಕ್ಷಿತ್ ಆರ್.ಉಮೇಶ್ ಕೂಡ ಏಳು ಪಾಯಿಂಟ್ಸ್ ಸಂಗ್ರಹಿಸಿದ್ದು ಕ್ರಮವಾಗಿ 8 ರಿಂದ 10ನೇ ಸ್ಥಾನ ಪಡೆದರು.
ಅಂತಿಮ (9ನೇ ಸುತ್ತಿನಲ್ಲಿ), ಬಿಳಿ ಕಾಯಿಗಳಲ್ಲಿ ಆಡಿದ ಆಗಸ್ಟಿನ್, ಅರ್ಜುನ್ ಪ್ರಭು ವಿರುದ್ಧ ಜಯಗಳಿಸಿದರೆ, ಮೂರನೇ ಶ್ರೇಯಾಕದ ಸಂತೋಷ್ ಭಂಡಾರಿ, ಕಪ್ಪು ಕಾಯಿಗಳಲ್ಲಿ ಆಡಿದ ಲಿಖಿತ್ ಚಿಲ್ಕುರಿ ಅವರಿಗೆ ಶರಣಾದರು. ಶ್ರೀಪಾದ್ ಕೆ.ವಿ. ಮತ್ತು ಕೇದಾರ್ ಉಮೇಶ್ ನಡುವಣ ಪಂದ್ಯ ‘ಡ್ರಾ’ ಆಯಿತು.
ಭದ್ರಾವತಿಯ ನಾಗಕಿರಣ್ (6.5) ನಾಲ್ಕನೇ ಬೋರ್ಡ್ನಲ್ಲಿ ಬಿ.ವಿ.ನಾಗರಾಜ್ ಎದುರು ಸೋಲನುಭವಿಸಿದರು. ಶಿರಸಿಯ ರಾಮಚಂದ್ರ ಭಟ್, ಭದ್ರಾವತಿಯ ಮಂಜುನಾಥ ಕೆ.ಹೆಗಡೆ ವಿರುದ್ಧ ಜಯ ಗಳಿಸಿದರು, ತೀರ್ಥಹಳ್ಳಿಯ ಪ್ರಣವ್ ಪ್ರಭಾಕರ್ 8 ವರ್ಷದೊಳಗಿನರ ವಿಭಾಗದಲ್ಲಿ, ಭದ್ರಾವತಿಯ ಖುಷಿ ಎಂ.ಹೊಂಬಾಳ್ 10 ವರ್ಷದೊಳಗಿನವರ ವಿಭಾಗದಲ್ಲಿ, ಕುಶಾಲನಗರದ ಪ್ರಿಯಾಂಕಾ ನಾರಾಯಣ್ 12 ವರ್ಷದೊಳಗಿನರ ವಿಭಾಗದಲ್ಲಿ, ದಾವಣಗೆರೆಯ ಪ್ರತೀಕ್ ಎಸ್.ಹೆಗಡೆ 14 ವರ್ಷದೊಳಗಿವರ ವಿಭಾಗದಲ್ಲಿ ಉತ್ತಮ ಸಾಧನೆಗಾಗಿ ವೈಯಕ್ತಿಕ ಬಹುಮಾನ ಪಡೆದರು.
ವೆಟರನ್ಸ್ ವಿಭಾಗದಲ್ಲಿ ಶಿರಸಿಯ ರಾಮಚಂದ್ರ ಭಟ್ (7 ಪಾಯಿಂಟ್) ವೈಯಕ್ತಿಕ ಬಹುಮಾನ ಗಳಿಸಿದರು, ಸಮಾರೋಪ ಸಮಾರಂಭದಲ್ಲಿ ಪ್ರಭಾ ಮಲ್ಲಿಕಾರ್ಜುನ್, ಯುಕೆಸಿಎ ಉಪಾಧ್ಯಕ್ಷ ವಿನಯ್ ಕುರ್ತಕೋಟಿ ಮತ್ತು ಅಡಿಷನಲ್ ಎಸ್ಪಿ ರವಿನಾರಾಯಣ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.