ಹೊಳೆನರಸೀಪುರ: ಹಸೆಮಣೆ ಏರಬೇಕಿದ್ದ ವರ ಕೊನೆಯ ಕ್ಷಣದಲ್ಲಿ ನಾಪತ್ತೆ ಯಾದ್ದರಿಂದ ವರನ ಕಿರಿಯ ಸಹೋದರ ಹುಡುಗಿಗೆ ತಾಳಿ ಕಟ್ಟಿ ಪತ್ನಿಯಾಗಿ ಸ್ವೀಕರಿಸಿರುವ ಅಪರೂಪದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಹೊಳೆನರಸೀಪುರದ ಪ್ರಕಾಶ್ ಎಂಬುವರ ಪುತ್ರಿ ಪಿ. ಲಕ್ಷ್ಮಿ ಯನ್ನು ಹುಣಸೂರು ಪಟ್ಟಣದ ರಾಮಯ್ಯ ಎಂಬುವವರ ಪುತ್ರ ಪ್ರದೀಪ್ಗೆ ಕೊಟ್ಟು ವಿವಾಹ ಮಾಡಿಸಲು ಎರಡೂ ಕುಟುಂಬದವರು ನಿಶ್ಚಯಿಸಿದ್ದರು.
ಆದರೆ ಕೆಲವೇ ದಿನಗಳ ಹಿಂದೆ ಲಗ್ನ ಪತ್ರಿಕೆ ಹಂಚಿ ಬರುವುದಾಗಿ ಹೇಳಿ ಮನೆಯಿಂದ ಹೊರ ಹೋದ ವರ ಎಚ್.ಆರ್.ಪ್ರದೀಪ್ ಮದುವೆಯ ಮುನ್ನಾದಿನದವರೆಗೆ ಮನೆಗೆ ಮರಳಿರಲಿಲ್ಲ.
ಭಾನುವಾರ ವರಪೂಜೆ ದಿನ ಹುಣಸೂರಿಗೆ ದೌಡಾಯಿಸಿದ್ದ ವಧುವಿನ ಕಡೆಯವರು ಈ ಸುದ್ದಿ ತಿಳಿದು ಕಂಗಾಲಾಗಿದ್ದರು. ಮುಂದೇನು ಮಾಡಬೇಕು ಎಂದು ಎರಡೂ ಕುಟುಂಬದವರು ರಾತ್ರಿ ಇಡೀ ಮಾತುಕತೆ ನಡೆಸಿ, ಕೊನೆಗೆ ನಾಪತ್ತೆಯಾಗಿದ್ದ ವರನ ಬದಲು ಅವರ ಸಹೋದರ ದೀಪು ಈಕೆಯನ್ನು ವರಿಸಬೇಕು ಎಂಬ ಪ್ರಸ್ತಾಪ ಮುಂದಿಡಲಾಗಿತ್ತು.
ಇದಕ್ಕೆ ಒಪ್ಪಿದ ಸಹೋದರ ದೀಪು ಸೋಮವಾರ ನಗರದ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಲಕ್ಷ್ಮೀ ಅವರನ್ನು ವರಿಸಿದರು. ಇದರಿಂದ ಎರಡೂ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.