ದಾವಣಗೆರೆ: ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಸಮುದಾಯದತ್ತ ದೃಷ್ಟಿ ಹರಿಸಬೇಕು. ಗ್ರಾಮೀಣ ಜನರ ಸೇವೆ ಮಾಡುವ ಸಂಕಲ್ಪ ತೊಡಬೇಕು ಎಂದು ಬೆಳಗಾವಿ ಕೆಎಲ್ಇ ವಿಶ್ವವಿದ್ಯಾಲಯದ ಕುಲಪತಿ ಡಾ.ಚಂದ್ರಕಾಂತ್ ಕೊಕಾಟೆ ಕರೆ ನೀಡಿದರು.
ಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಥಮ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರ ಇಂದು ವ್ಯವಹಾರ ಎನ್ನುವಂತೆ ಆಗಿದೆ. ಅಂತಹ ಮನೋಭಾವ ಹೋಗಲಾಡಿಸಬೇಕು. ವೈದ್ಯಕೀಯ ಕ್ಷೇತ್ರ ಎಂದರೆ ಸೇವಾಮನೋಭಾವ ಎನ್ನುವುದನ್ನು ಕಿರಿಯ ವೈದ್ಯರು ಅರ್ಥ ಮಾಡಿಕೊಳ್ಳಬೇಕು. ವಿದೇಶಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದರೂ, ಮಾತೃಭಾಷೆಯ ಬಗೆಗಿನ ಪ್ರೀತಿ ತೊರೆಯಬಾರದು ಎಂದು ಕಿವಿಮಾತು ಹೇಳಿದರು.
ಆದಿವಾಸಿಗಳು, ಬುಡಕಟ್ಟು ಜನರು, ಕೊಳೆಗೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ವೈದ್ಯರು ನಮ್ಮ ಮಧ್ಯೆ ಇದ್ದಾರೆ. ಅಂತಹ ವೈದ್ಯರ ಸೇವೆ, ತ್ಯಾಗ ನಮಗೆ ಆದರ್ಶವಾಗಬೇಕು. ದಟ್ಟ ಮಳೆಕಾಡುಗಳಲ್ಲಿ ಗ್ರಾಮೀಣ ಪ್ರದೇಶ ತಲುಪಲು ಸಾಧ್ಯವಾಗದಂತಹ ಭಾಗಗಳಲ್ಲೂ ಯಶಸ್ವಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುವ ವೈದ್ಯರ ಬದುಕು ನಮ್ಮದೂ ಆಗಬೇಕು ಎಂದರು.
ವಿಶ್ವದಲ್ಲಿ ಇಂದು ವೈದ್ಯಕೀಯ ಕ್ಷೇತ್ರ ಸಾಕಷ್ಟು ಬೆಳೆದಿದೆ. 335 ವೈದ್ಯಕೀಯ ಕಾಲೇಜು ಭಾರತದ್ಲ್ಲಲಿವೆ. ಪ್ರತಿ ವರ್ಷ 40 ಸಾವಿರ ವೈದ್ಯರು ಸೃಷ್ಟಿಯಾಗುತ್ತಾರೆ. ಆದರೆ, ಭಾರತದಲ್ಲಿ ವೈದ್ಯಕೀಯ ಸೇವೆ ಇಂದಿಗೂ ಸಮರ್ಪಕವಾಗಿಲ್ಲ. ನಕಲಿ ಔಷಧ ಮಾರಾಟ ಜಾಲಗಳು ಭಾರತ, ಚೀನದಂತಹ ದೇಶಗಳಲ್ಲಿ ಹೆಚ್ಚಿದೆ. ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಔಷಧಗಳನ್ನು ಬಳಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಪ್ರಾಥಮಿಕ ಚಿಕಿತ್ಸೆ ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.
ರಾಜ್ಯವೂ ಸೇರಿದಂತೆ ಅನೇಕ ಭಾಗಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೂ ಆತ್ಮಹತ್ಯೆ ಮಾಡಿಕೊಳ್ಳುವ ಮನೋಸ್ಥಿತಿ ತಲುಪಿರುವುದು ಕಳವಳಕಾರಿ ವಿಚಾರ. ನಮ್ಮ ಪ್ರತಿಭೆಯ ಜತೆಗೆ, ನಡವಳಿಕೆಗಳೂ ಬದಲಾಗಬೇಕಾದ ಅಗತ್ಯವಿದೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಪ್ರಸಕ್ತ ವರ್ಷ ಕಾಲೇಜಿಗೆ ಶೇ. 92ರಷ್ಟು ಫಲಿತಾಂಶ ಬಂದಿದೆ. ಅದಕ್ಕೆ ಇಲ್ಲಿನ ಉತ್ತಮ ಉಪನ್ಯಾಸಕರೇ ಕಾರಣ ಎಂದು ಶ್ಲಾಘಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪಿ. ನಾಗರಾಜ್, ಉಪ ಪ್ರಾಂಶುಪಾಲರಾದ ಡಾ.ಶಶಿಕಲಾ ಪಿ. ಕೃಷ್ಣಮೂರ್ತಿ, ಡಾ.ಕಾಳಪ್ಪನವರ್, ಡಾ.ಅರುಣ್ಕುಮಾರ್, ಡಾ.ಉಮಾಕಾಂತ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.