ಚಿತ್ರದುರ್ಗ: ದೈಹಿಕ ಚಟುವಟಿಕೆ ಇಲ್ಲದ ಮನುಷ್ಯ ಜಡತ್ವಕ್ಕೆ ಒಳಗಾಗುತ್ತಾನೆ. ಇದು ಮಾನಸಿಕ ಜಡತ್ವಕ್ಕೂ ದಾರಿ ಮಾಡುತ್ತದೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶುಕ್ರವಾರ ಬೆಳಿಗ್ಗೆ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಗರದ ಆಜಾದ್ ಮಿಲ್ ರಸ್ತೆ, ಸದಾನಂದಯ್ಯ ಬಡಾವಣೆ, ರೈಲುನಿಲ್ದಾಣದ ರಸ್ತೆಯಲ್ಲಿ ಜನ ಜಾಗೃತಿ ಪಾದಯಾತ್ರೆ ನಡೆಸಿದ ನಂತರ ಅವರು ಮಾತನಾಡಿದರು.
ಇಂದು ವಿದ್ಯಾರ್ಥಿಗಳಲ್ಲಿರುವ ಶಿಸ್ತು ವಯಸ್ಸಾದವರಲ್ಲಿ ಕಂಡು ಬರುತ್ತಿಲ್ಲ. ವಯಸ್ಸಾದಂತೆಲ್ಲಾ ಯಾವ ಶಿಸ್ತು ಬೇಡ ಎಂದು ಭಾವಿಸುತ್ತೇವೆ. ಅರಿವು ಮೂಡಿಸುವ ಅವಕಾಶ ಬಂದಾಗ ಬಾಗಿಲು ತೆರೆಯುವುದಿಲ್ಲ. ಆದರೆ, ಆಮಿಷವೊಡ್ಡುವವರಿಗೆ ಕಾತುರದಿಂದ ನಿರೀಕ್ಷಿಸುವ ಮನಸ್ಥಿತಿ ಬೆಳೆಸಿಕೊಂಡಿರುವುದು ವಿಷಾದನೀಯ ಎಂದು ನುಡಿದರು.
ಅರಿವು, ಆರೋಗ್ಯ, ಶಾಂತಿ, ಸಮಾಧಾನ, ಜ್ಞಾನ ಕ್ಷಯಿಸಿ ಹೋಗುವುದಿಲ್ಲ. ಒಳ್ಳೆಯ ಓದು, ಬರವಣಿಗೆ, ಚಿಂತನೆ ನಮ್ಮನ್ನು ಕ್ರಿಯಾಶೀಲವಾಗಿರಿಸುತ್ತವೆ. ವಿಚಾರಗಳಲ್ಲಿ ಶಕ್ತಿ ಇದೆ ಎನ್ನುವುದನ್ನು ತಿಳಿಸುತ್ತದೆ. ಬದುಕಿಗೆ ಒಳನೋಟ, ಪ್ರೇರಣೆ ಸಿಗುತ್ತವೆ. ಸುಮ್ಮನೆ ಕುಳಿತರೆ ಅನುಭವಗಳು ಸಿಗುವುದಿಲ್ಲ. ಬದುಕು ಸಾಹಸಗಳ ಸಂಗಮ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಜಯಕುಮಾರ್, ಉದ್ಯಮಿ ಎಂ.ಕೆ. ತಾಜ್ಪೀರ್, ನಗರಸಭಾ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ನಗರಸಭಾ ಸದಸ್ಯ ವೆಂಕಟೇಶ್, ಮಹಮದ್ ಹನೀಫ್, ಮುರುಘರಾಜೇಂದ್ರ ಒಡೆಯರ್,ಪ್ರೊ.ಈ. ಚಿತ್ರಶೇಖರ್, ಆರ್. ಶೇಷಣ್ಣ ಕುಮಾರ್, ಕೆಇಬಿ ಷಣ್ಮುಖಪ್ಪ, ವಿವಿಧ ಶಾಲಾ-ಕಾಲೇಜುಗಳ ಬೋಧಕ, ಬೋಧಕೇತರ ವರ್ಗದವರು ಹಾಗೂ ನಾಗರಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.