ಆಲಮಟ್ಟಿ: `ಗ್ರಾಮೀಣ ಭಾಗದಲ್ಲಿನ ನೇಕಾರರು ಸಂಕಷ್ಟದಲ್ಲಿದ್ದು ಅವರ ಮಕ್ಕಳು ತೋರುವ ಉತ್ತಮ ಶೈಕ್ಷಣಿಕ ಸಾಧನೆಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ದೊರಕಿಸಿಕೊಡಲಾಗುವುದು~ ಎಂದು ಶಾಸಕ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಅವರು ಇಲ್ಲಿಯ ಸಮುದಾಯ ಭವನದಲ್ಲಿ ವಿಜಾಪುರ ಜಿಲ್ಲಾ ದೇವಾಂಗ ನೌಕರರ ಸಂಘದವರು ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ನಿಡಗುಂದಿ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಶಿಕ್ಷಣವಂತರಾದರೆ ಅದಕ್ಕಿಂತ ದೊಡ್ಡ ಸಂಪತ್ತು ಬೇರೆ ಇಲ್ಲ. ಪ್ರತಿಭೆಗೆ ಸೂಕ್ತ ಪೋಷಣೆ ನೀಡುತ್ತಿರುವ ನೌಕರರ ಸಂಘದ ಕಾರ್ಯ ಪ್ರಶಂಸನೀಯ. ಕುರೂಪಿಯಾದವನು ಸಹ ವಿದ್ಯೆಗಳಿಸಿ ಸುರೂಪಿಯಾಗಲು ಸಾಧ್ಯವಿದೆ. ವಿದ್ಯಾರ್ಥಿಗಳು ಶೀಲ, ಚಾರಿತ್ರ್ಯವನ್ನು ಕಾಪಾಡಿಕೊಂಡು ಸಾಧನೆ ಮಾಡಬೇಕು ಎಂದರು.
ಬಾಗಲಕೋಟೆ ಜಿ.ಪಂ. ಅಧ್ಯಕ್ಷೆ ಕವಿತಾ ಪ್ರಭಾಕರ ದಡ್ಡೇನವರ, ಜೆಡಿಎಸ್ ಧುರೀಣ ಅಪ್ಪುಗೌಡ ಪಾಟೀಲ, ಬ.ಬಾಗೇವಾಡಿ ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಸಹಾಯಕಿ ಪ್ರಾಧ್ಯಾಪಕಿ ನಾಗರತ್ನಾ ಯಡಹಳ್ಳಿ, ನಿಡಗುಂದಿ ಕೆಎಚ್ಡಿಸಿಯ ನಿವೃತ್ತ ವ್ಯವಸ್ಥಾಪಕ ಮಲ್ಲಿಕಾರ್ಜುನ ತೊಗರಿ, ಪ್ರಕಾಶ ಕೋಳೂರ, ಆಳಂದ ಪುರಸಭೆ ಸದಸ್ಯ ಗುರುನಾಥ ಷಣ್ಮುಖ, ವಿಜಾಪುರ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಹೊನ್ನಪ್ಪ ಗುಳೇದಗುಡ್ಡ, ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಶ್ಯಾಮಲಾ ಮಂದೇವಾಲಿ, ಈರಣ್ಣ ಔರಸಂಗ , ಎಂ ಎಸ್ ಅಂಕದ, ಸೂರ್ಯಕಾಂತ ಅಂಕದ, ಎಂ ಕೆ ನಿಂಬಾಳ, ಪ್ರಭಾಕರ ದಡ್ಡೇನವರ ಇದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ವಿ.ವೈ. ಅಂಕದ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಬಸಪ್ಪ ಬಸರಕೋಡ ಅವರಿಗೆ ಕನಕಾಭಿಷೇಕ ಮಾಡಲಾಯಿತು. ಜಿಪಂ ಅಧ್ಯಕ್ಷೆ ಕವಿತಾ ಪ್ರಭಾಕರ ದಡ್ಡೇನವರ,ಗಂಗವ್ವ ಬಸರಕೋಡ,ಎಂ ಎ ತೊಗರಿ,ಮಲ್ಲಿಕಾರ್ಜುನ ಜಮಖಂಡಿ ತಲಾ ಐದು ಸಾವಿರ ರೂಪಾಯಿಗಳನ್ನು ಸಂಘದ ಅಭಿವೃದ್ಧಿಗೆ ದೇಣಿಗೆಯಾಗಿ ನೀಡಲು ವಾಗ್ದಾನ ಮಾಡಿದರು.
ಐ.ಎಲ್. ಕಳಸಾ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಎಸ್ ಗೋಡ್ಯಾಳ ಮತ್ತು ಎಸ್ ಎಸ್ ಹುಬ್ಬಳ್ಳಿ ನಿರೂಪಿಸಿದರು.ಪಿ ಎಸ್ ಇಜೇರಿ ವಂದಿಸಿದರು.ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.