ಶ್ರೀರಂಗಪಟ್ಟಣ: ಬದ್ಧ ವೈರಿಗಳು ಎಂದೇ ಜನಜನಿತವಾಗಿರುವ ಜೆಡಿಎಸ್- ಬಿಜೆಪಿ ಪಕ್ಷಗಳು ಇಲ್ಲಿನ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಂಡು ಅಧಿಕಾರ ಹಿಡಿಯುವ ಮೂಲಕ ಅಚ್ಚರಿ ಮೂಡಿಸಿವೆ. ಅಲ್ಲದೆ ಬಿಜೆಪಿಯ ಏಕೈಕ ಸದಸ್ಯನಿಗೇ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಮೂಲಕ ಜೆಡಿಎಸ್ ಇನ್ನಷ್ಟು ಆಶ್ಚರ್ಯವನ್ನು ಉಂಟುಮಾಡಿದೆ.
ಶುಕ್ರವಾರ ನಡೆದ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಟಿ.ಶ್ರೀಧರ್ ಹಾಗೂ ಜೆಡಿಎಸ್ನ ರಾಜೇಶ್ವರಿ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅಧಿಕಾರ ಹಿಡಿಯಲು ಜೆಡಿಎಸ್ಗೆ ಒಬ್ಬ ಸದಸ್ಯರ ಕೊರತೆ ಇತ್ತು. 7 ಸದಸ್ಯರನ್ನು ಹೊಂದಿರುವ ಜೆಡಿಎಸ್ 3 ಸದಸ್ಯರಿರುವ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಯಿತು. 15 ಸದಸ್ಯ ಬಲದ ತಾ.ಪಂ.ನಲ್ಲಿ ಅಧಿಕಾರ ಹಿಡಿಯಲು 8 ಸದಸ್ಯರ ಅಗತ್ಯವಿತ್ತು. ಕಾಂಗ್ರೆಸ್ ಜತೆ ಮಾತುಕತೆ ವಿಫಲವಾದ ಕಾರಣ ಬಿಜೆಪಿಯ ಏಕೈಕ ಸದಸ್ಯ, ಚಂದಗಾಲು ಕ್ಷೇತ್ರದ ಟಿ.ಶ್ರೀಧರ್ ಬೆಂಬಲದೊಡನೆ ಜೆಡಿಎಸ್ ಅಧಿಕಾರ ಹಿಡಿಯಿತು. ಅದರೆ ಅಧ್ಯಕ್ಷ ಪದವಿಯನ್ನು ಹಂಚಿಕೆ ಸೂತ್ರದ ಅನ್ವಯ ಬಿಜೆಪಿಗೆ ಬಿಟ್ಟುಕೊಟ್ಟಿದೆ.