ಗಂಗಾವತಿ: `ಉತ್ತರ ಕರ್ನಾಟಕದಲ್ಲಿ 2009ರಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಸಂತ್ರಸ್ತರಾದವರ ಹೆಸರಲ್ಲಿ ಸಂಗ್ರಹಿಸಿದ ಹಣ ದುರ್ಬಳಕೆ ಮಾಡಿಕೊಳ್ಳುವಂಥ ನೀಚ ಮತ್ತು ಸಣ್ಣತನಕ್ಕೆ ನಾನು ಇಳಿದಿಲ್ಲ~ ಎಂದು ಶಾಸಕ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಶ್ರೀರಾಮನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚೆಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಲ್ಲಾ ಶೇಷಗಿರಿ ರಾವ್ ಮಾಡಿದ ಆರೋಪ ಮತ್ತು ಸಂತ್ರಸ್ತರ ಹಣ ದುರ್ಬಳಕೆಯಾದ ಬಗ್ಗೆ ಗಮನ ಸೆಳೆದಾಗ ಶಿವರಾಜ ತಂಗಡಗಿ ತಿರುಗೇಟು ನೀಡಿದರು.
ಸಂತ್ರಸ್ತರ ಕೇವಲ ಎರಡು ಇಲ್ಲವೆ ಮೂರು ಲಕ್ಷ ರೂಪಾಯಿ ಹಣ ಬಳಸಿಕೊಳ್ಳುವಂಥ ಸ್ಥಿತಿ ನನಗಿಲ್ಲ. ನನ್ನ ಬೆಂಬಲಿಗರ್ಯಾರು ಹಣ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಶಿವರಾಜ ತಂಗಡಗಿ ಇತ್ತೀಚಿನ ಬಿಜೆಪಿಯ ಟೀಕೆಗೆ ಉತ್ತರ ನೀಡಿದರು.
ಉತ್ಸಾಹಿಗಳೆಲ್ಲಿ?: ಐತಿಹಾಸಿಕ ಕನಕಗಿರಿ ಉತ್ಸವಕ್ಕೆ ನಾನು ಚಾಲನೆ ನೀಡಿದ ಬಳಿಕ ಮತ್ತೆ ಕ್ಷೇತ್ರದಲ್ಲಿ ಉತ್ಸವ ನಡೆದಿಲ್ಲ. ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಉತ್ಸವ ನಡೆಯಬಾರದು ಎಂದು ಹಲವರು ತೆರೆಮರೆಯಲ್ಲಿ ಭಾರಿ ಕಸರತ್ತು ಮಾಡಿದರು. ಅದಕ್ಕಾಗಿ ಪದೇ ಪದೇ ಹಣ ತರುುದಾಗಿ ಬೆಂಗಳೂರಿಗೂ ಹೋದರು. ಹಾಗೆ ಹೋದ ಉತ್ಸಾಹಿಗಳು ಇಗೆಲ್ಲಿ ಅಡಗಿದ್ದಾರೆ? ಬೆಂಗಳೂರಿಗೆ ಹೋದವರು ಎತ್ತ ನಾಪತ್ತೆಯಾದರು? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಉತ್ಸವ ಅನುಮಾನ: ಸದ್ಯದಲ್ಲಿ ಕನಕಗಿರಿ ಉತ್ಸವ ನಡೆಯುವುದು ಅನುಮಾನ ಎಂದು ಸೂಚ್ಯವಾಗಿ ನುಡಿದ ತಂಗಡಗಿ, ಒಂದೆಡೆ ಸರ್ಕಾರದ ಅನಾದರಣೆಗೆ ಒಳಗಾಗಿರುವುದರಿಂದ ಅನುದಾನದ ಕೊರತೆ ಮತ್ತೊಂದೆಡೆ ಹವಾಮಾನ ವೈಪರೀತ್ಯದ ಸಮಸ್ಯೆ ಕಾಡುತ್ತಿವೆ.
ಅನುದಾನ ಹೊಂದಿಸಲು ಸಮಯ ಬೇಕು. ಬೆನ್ನ ಹಿಂದೆಯೆ ಆಷಾಢ ಶುರುವಾಗುತ್ತದೆ. ಬೀಸುವ ಗಾಳಿಗೆ ಉತ್ಸವ ನಡೆಸುವುದು ಕಷ್ಟ. ಬಳಿಕ ಮಳೆಗಾಲ. ಈ ಹಿನ್ನೆಲೆ ನವೆಂಬರ್-ಡಿಸೆಂಬರ್ ಒಳಗೆ ಆಚರಿಸಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಒಮ್ಮೆ ಸಂಪರ್ಕಿಸುತ್ತೇನೆ ಎಂದರು.
ಎಪಿಎಂಸಿ ಮಾಜಿ ಸದಸ್ಯ ಅಮರೇಶಪ್ಪ ಗೋನಾಳ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿದ್ದನಗೌಡ, ವಕೀಲ ಸ್ವರಾಜ್, ಯುವ ಮುಖಂಡ ನಾಗರಾಜ ಬಳಗಾನೂರು, ನಲ್ಲಾ ಚಂದ್ರರಾವ್, ಭಾಸ್ಕರ್ ರೆಡ್ಡಿ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.