ಧಾರವಾಡ: ಸಹಭೋಜನ, ಕಾಲುವೆ, ಕೆರೆ-ಕಟ್ಟೆಗಳಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುವ ಮೂಲಕ ಮಕರ ಸಂಕ್ರಮಣ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.
ನಗರದ ಕಿತ್ತೂರ ಚೆನ್ನಮ್ಮ ಪಾರ್ಕ್, ಸಾಧನಕೇರಿ ಕೆರೆ, ನೀರಸಾಗರ ಕೆರೆಯ ದಂಡೆಯ ಮೇಲೆ ಹಾಗೂ ಹೊಲಗಳಲ್ಲಿ ಜನರು ಪೂಜೆ ಸಲ್ಲಿಸಿ, ಸಹಭೋಜನ ಮಾಡಿದರು.
ಮಹಿಳೆಯರು ಬೆಳಗಿನ ಜಾವವೇ ಮನೆಯಲ್ಲಿ ಪೂಜೆ ಮುಗಿಸಿಕೊಂಡು, ಊಟ ತಯಾರಿಸಿಕೊಂಡು ಹೊರಗಡೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ಹೊತ್ತಿಗೆ ವಿವಿಧ ಬಡಾ ವಣೆಗಳ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಂಜೆ ಹೊತ್ತಿಗೆ ಮತ್ತೆ ಎಲ್ಲ ರಸ್ತೆಗಳಲ್ಲಿ ಎಳ್ಳು- ಬೆಲ್ಲ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು.
ದೇವಸ್ಥಾನಗಳ ದರ್ಶನ ಪಡೆದ ನಂತರ ಹಿರಿಯರಿಗೆ ಎಳ್ಳು- ಬೆಲ್ಲ ನೀಡಿ ಕಿರಿಯರು ಆಶೀರ್ವಾದ ಪಡೆಯು ತ್ತಿದ್ದುದು ಸಾಮಾನ್ಯವಾಗಿತ್ತು. ಸ್ನೇಹಿತರು ಪರಸ್ಪರ ಎಳ್ಳು-ಬೆಲ್ಲ ಕೊಟ್ಟು ಶುಭಾಶಯ ಕೋರುತ್ತಿದ್ದುದು ಎಲ್ಲೆಡೆ ಕಂಡುಬಂದಿತು.
ಕಲಘಟಗಿ ತಾಲ್ಲೂಕಿನ ಧುಮ್ಮವಾಡದ ನೀರಸಾಗರ ಕೆರೆಯ ದಂಡೆಯ ಮೇಲೆ ಸಂಕ್ರಮಣ ಹಬ್ಬದ ಆಚರಣೆಗೆ ಸಾವಿರಾರು ಜನರು ಆಗಮಿಸಿದ್ದರು. ಟ್ರ್ಯಾಕ್ಸ್, ಟೆಂಪೋ, ಸುಮೊ, ವ್ಯಾನ್, ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಜನರು ತಂಡೋಪ ತಂಡವಾಗಿ ಆಗಮಿಸಿದ್ದರು. ನೀರಸಾಗರ ಕೆರೆಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸಿದ ನಂತರ ಸಹಭೋಜನ ಮಾಡಿದರು.
ಹೂಲಿ ಅಜ್ಜನವರ ತೆಪ್ಪೋತ್ಸವ ಜಾತ್ರೆ: ನವಲಗುಂದ ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ಸಂಕ್ರಮಣ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹೂಲಿ ಅಜ್ಜನವರ ತೆಪ್ಪೋತ್ಸವ ಸಹ ವಿಜೃಂಭಣೆಯಿಂದ ನಡೆಯಿತು.
ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಸಹಸ್ರಾರು ಜನರು ಸ್ನಾನ ಮಾಡಿ ಪೂಜೆ ಸಲ್ಲಿಸಿದರು. ಜಾತ್ರೆಗೆ ಹಾಗೂ ಹಬ್ಬದ ಆಚರಣೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಚಕ್ಕಡಿಗಳಲ್ಲಿ ಆಗಮಿಸಿದರು.
ಕಾಲುವೆ ದಂಡೆಯ ಮೇಲೆ ಜನರು ಸಹಭೋಜನ ನಡೆಸಿದರು.