ಬೆಂಗಳೂರು: ನಗರದಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ದುಡಿದ ಮತ್ತು ಸಹಕರಿಸಿದ ಎಲ್ಲರಿಗೂ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಗೃಹ ಸಚಿವ ಆರ್.ಅಶೋಕ್ ಅಭಿನಂದನೆ ಸಲ್ಲಿಸಿದರು.
ಸಮ್ಮೇಳನ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಕನ್ನಡ ಸಾಹಿತ್ಯ ಪರಿಷತ್ಗೆ ಇನ್ನೂ 1.5 ಕೋಟಿ ರೂಪಾಯಿ ಬಾಕಿ ನೀಡಬೇಕಿದ್ದು, ಅದನ್ನು ಇನ್ನೊಂದು ವಾರದಲ್ಲಿ ಪಾವತಿಸಲಾಗುವುದು ಎಂದರು.
ಸಮ್ಮೇಳನಕ್ಕೆ 4ರಿಂದ 5 ಕೋಟಿ ರೂಪಾಯಿ ಖರ್ಚಾಗಿರುವ ಸಾಧ್ಯತೆ ಇದ್ದು, ಸದ್ಯದಲ್ಲೇ ಪೂರ್ಣ ಲೆಕ್ಕಪತ್ರ ನೀಡಲಾಗುವುದು. ನಗರ ಜಿಲ್ಲಾಧಿಕಾರಿಯೇ ಖಂಜಾಚಿ ಕೂಡ ಆಗಿದ್ದಾರೆ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 8 ಕೋಟಿ ರೂಪಾಯಿ ಮೊತ್ತದ ಪುಸ್ತಕಗಳು ಮಾರಾಟವಾಗಿವೆ ಎಂದರು.