ಬೆಂಗಳೂರು: 2002ರಿಂದ 2009ರ ಅವಧಿಯಲ್ಲಿ ಕಲ್ಲಿದ್ದಲು ಖರೀದಿ, ಸಾಗಣೆ ಮತ್ತು ಅದನ್ನು ತೊಳೆಯುವಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಪಿ.ಮೋಹನ್ ಕುಮಾರ್ ವಿಚಾರಣಾ ಆಯೋಗ ಶುಕ್ರವಾರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಸ್ವತಃ ಮೋಹನ್ ಕುಮಾರ್ ಅವರೇ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮೂರು ಸಂಪುಟಗಳ ವರದಿಯನ್ನು ಹಸ್ತಾಂತರಿಸಿದರು. ವರದಿಯಲ್ಲಿನ ಮಾಹಿತಿ ನೀಡಲು ನಿರಾಕರಿಸಿದ ನ್ಯಾಯಮೂರ್ತಿ, `ನಾನು ಏನು ಹೇಳಬೇಕೊ ಅದನ್ನು ವರದಿಯಲ್ಲಿ ಹೇಳಿದ್ದೇನೆ. ಸರ್ಕಾರದ ಕಡೆಯಿಂದ ಆ ಕುರಿತು ಮಾಹಿತಿ ಪಡೆಯರಿ~ ಎಂದು ಹೇಳಿದರು.
ಮುಖ್ಯಮಂತ್ರಿ ಮಾತನಾಡಿ, ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ರವಿಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.