ಚಿತ್ರದುರ್ಗ: ಜಾತಿ ಕೇವಲ ಜನನಕ್ಕಾಗಿಯೇ ಹೊರತು ಅದರಿಂದಾಚೆಗಿನ ಸಾಧನೆ ಹಾಗೂ ಸಾಹಸಕ್ಕೆ ಜಾತಿಯ ಸೋಂಕಿಲ್ಲ ಎಂದು ಮುರುಘಾಮಠದ ಶಿವಮೂರ್ತಿ ಮುರುಘ ಶರಣರು ಅಭಿಪ್ರಾಯಪಟ್ಟರು.
ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಜಂಗಮ ಸಮಾಜ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಷ್ಯವೇತನ ವಿತರಣಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಜನರು ಸಂಸ್ಕಾರ, ಧರ್ಮ, ಯೋಗ, ಧ್ಯಾನ, ಶಿಸ್ತು, ಸಂಘಟನೆ ಹಾಗೂ ಶಿವಯೋಗ ಪ್ರಜ್ಞೆ ಮರೆಯುತ್ತಿದ್ದಾರೆ. ಅದಕ್ಕಾಗಿ ಮುರುಘಾಮಠ ಎಲ್ಲ ಸಮುದಾಯಗಳನ್ನು ಸಂಘಟಿಸುವ, ಧರ್ಮಭೋದನೆ ಮಾಡುವ ಹಾಗೂ ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಕಾಯಕ ಮಾಡುತ್ತಿದೆ ಎಂದರು.
ಧರ್ಮ ಪ್ರಚಾರಕ್ಕಾಗಿ ತಮ್ಮ ಮಕ್ಕಳನ್ನು ಕಳುಹಿಸುವ ಕಾಲವೊಂದಿತ್ತು. ಅದೀಗ ಕಣ್ಮರೆಯಾಗಿದ್ದು, ಬುದ್ಧಿವಂತರನ್ನು ತಾವಿಟ್ಟುಕೊಂಡು ದಡ್ಡರನ್ನು ಮಠಕ್ಕೆ ಕಳುಹಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಮಠ, ಪೀಠಗಳ ಉಳಿವಿಗಾಗಿ ಎಲ್ಲ ರೀತಿಯ ಸಹಕಾರ ನೀಡುವ ಮಂದಿ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಹೆಚ್ಚು ಅಂಕಗಳಿಸಿದ ಅಕ್ಷಯ್, ಲಿಖಿತ್, ಧನಂಜಯ, ಅನ್ನಪೂರ್ಣಾ, ಟಿ.ಅಮಿತ್, ಎಸ್.ಎಂ.ಶಶಾಂಕ್, ಡಿ.ಓ.ತ್ರಿವೇಣಿ, ಸಿ.ಜೀವಿನಿ, ಸಿ.ಜಿತೇಂದ್ರ,
ಎಸ್.ಕಾವ್ಯಶ್ರೀ, ಬಿ.ಎಂ.ವಿನಯ್, ಮಧನ್, ಸಚಿನ್ ಚರಂತಿಮಠ್, ಕೆ.ಎಂ.ಮೇಘನಾ, ಬಿ.ಎಂ.ಶ್ರೇಯಸ್, ಎಸ್.ಎಂ.ಸುನಿಲ್, ಅವಿನಾಶ್ ಸೊಪ್ಪಿನಮಠ, ಅನುಷಾ ಸೊಪ್ಪಿನಮಠ, ಎಸ್.ಗೌತಮ್ ಹಾಗೂ ವಿಜಯಶ್ರೀ ಅವರನ್ನು ಸನ್ಮಾನಿಸಲಾಯಿತು.
ಜತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು. ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಎಂ.ರೇವಣ್ಣ, ಎಂವೈಟಿ ಸ್ವಾಮಿ, ಡಾ.ಎಚ್.ಎಂ.ಶೈಲಜಾ ಯರ್ರೀಸ್ವಾಮಿ, ಎಂ.ವಿ.ಚನ್ನಯ್ಯ, ಎಸ್.ಶಿವಾನಂದ ಸ್ವಾಮಿ, ಗಡ್ಡ ದೇವರಮಠ ಅವರನ್ನು ಸನ್ಮಾನಿಸಲಾಯಿತು.
ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬೇಡ ಜಂಗಮ ಸಮಾಜದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ಎಂ.ವೀರೇಶ್, ಬಸವತತ್ವ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಪಿ.ಎಂ.ಗುರುಲಿಂಗಯ್ಯ, ವೀರಶೈವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಶಿವಪ್ರಕಾಶ್, ಶಿವಸಿಂಪಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಶಿವಹಾಲಪ್ಪ, ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದವ್ವನಹಳ್ಳಿ
ಎಸ್.ಪರಮೇಶ್, ಸೋಮಶೇಖರ್ ಮಂಡಿಮಠ್, ರುದ್ರಪ್ಪ, ನಾಗರಾಜ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.