ಪುತ್ತೂರು: ಸಾಹಿತ್ಯ ಅಕಾಡೆಮಿಯು ಪ್ರಯೋಗ ಶಾಲೆಯಾಗಬೇಕು. ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಏನೆಲ್ಲಾ ಮಾಡಬಹುದು ಎನ್ನುವ ಕುರಿತು ಚಿಂತನೆ-ಪ್ರಯೋಗಗಳು ನಡೆಯಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ ಹೇಳಿದರು.
ಪುತ್ತೂರಿನ ಪುರಭವನದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಪುತ್ತೂರು ಬೊಳುವಾರಿನ ಸಾಂಸ್ಕೃತಿಕ ಕಲಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ `ರಂಗ ಸಂಭ್ರಮ' ಕೊಂಕಣಿ ನಾಟಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾಷೆ ಮತ್ತು ಸಂಸ್ಕೃತಿಯ ಉಳಿಗಾಗಿ ಹುಟ್ಟು ಹಾಕಲಾದ ಸಾಹಿತ್ಯ ಅಕಾಡೆಮಿಗಳ ಚಟುವಟಿಕೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪುವಂತಾಗಬೇಕು. ಹಾಗಾದರೆ ಮಾತ್ರ ಅದರ ಹುಟ್ಟು ಸಾರ್ಥಕ ಎಂದು ಅವರು ತಿಳಿಸಿದರು.
ಶಾಸಕಿ ಮಲ್ಲಿಕಾ ಪ್ರಸಾದ್ ಉದ್ಘಾಟಿಸಿದರು. ಕೊಂಕಣಿ ಶ್ರಿಮಂತ ಭಾಷೆ. ವಿದ್ಯಾವಂತರಾದರೂ ಸರ್ಕಾರಿ ಕೆಲಸವನ್ನು ಅವಲಂಬಿಸದೆ ಸ್ವಉದ್ಯೋಗದಲ್ಲಿ ಸಂತೋಷ ಕಂಡ ಈ ಭಾಷಿಗರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಸಾಹಿತಿ ಗೋಪಾಲಕೃಷ್ಣ ಪೈ ಮುಖ್ಯ ಅತಿಥಿಯಾಗಿದ್ದರು. ಕೊಂಕಣಿ ಭಾಷಿಕರಿಂದ ಮತ್ತಷ್ಟು ಕೃತಿಗಳು ಮೂಡಿಬರಬೇಕಾಗಿದ್ದು, ಗಟ್ಟಿಯಾದ ಸಾಹಿತ್ಯವು ಸೃಷ್ಟಿ ಯಾಗದೇ ಹೋದರೆ ಮುಂದಿನ ಜನಾಂಗವು ನಮ್ಮನ್ನು ಕ್ಷಮಿಸದು ಎಂದು ಹೇಳಿದರು.
ಪುತ್ತೂರು ಲಕ್ಷ್ಮಿ ವೆಂಕಟರಮಣ ದೇವಾಲಯದ ಆಡಳಿತ ಟ್ರಸ್ಟಿ ಎಂ.ಅನಂತ ಶೆಣೈ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪುತ್ತೂರು ರೋಟರಿ ಸಿಟಿ ಮಾಜಿ ಅಧ್ಯಕ್ಷ ಜೋನ್ ಕುಟಿನ್ಹಾ, ವಿದ್ಯುತ್ ಇಲಾಖೆಯ ನಿವೃತ್ತ ಇಂಜಿನಿಯರ್ ಶಿವಾನಂದ ಶೇಟ್ ಅತಿಥಿಗಳಾಗಿದ್ದರು.