ಬೆಂಗಳೂರು: ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು ‘ಆಧಾರ್’ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ ಅಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿರುವ ಕಾರಣ, ರಾಜ್ಯದಲ್ಲಿ ಆಧಾರ್ ಗುರುತಿನ ಚೀಟಿ ನೀಡುವ ಪ್ರಕ್ರಿಯೆಗೆ ಇನ್ನಷ್ಟು ಚುರುಕು ನೀಡುವ ಸಾಧ್ಯತೆ ಕ್ಷೀಣಿಸಿದೆ.
ಅಡುಗೆ ಅನಿಲ (ಎಲ್ಪಿಜಿ) ಸಬ್ಸಿಡಿ ಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ (ಡಿಸಿಟಿ) ಯೋಜನೆಯನ್ನು ರಾಜ್ಯದ ಇನ್ನೂ 19 ಜಿಲ್ಲೆಗಳಿಗೆ ವಿಸ್ತರಿಸಲು ಪೆಟ್ರೋಲಿಯಂ ಇಲಾಖೆ ಇತ್ತೀಚೆಗೆ ತೀರ್ಮಾನಿಸಿದ್ದ ಕಾರಣ, ಆಧಾರ್ ಗುರುತಿನ ಚೀಟಿ ನೀಡುವ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಲು ಇ–ಆಡಳಿತ ಕೇಂದ್ರ ನಿರ್ಧರಿಸಿತ್ತು.
ಆದರೆ ಸುಪ್ರೀಂ ಕೋರ್ಟ್ ನೀಡಿ ರುವ ಮಧ್ಯಂತರ ಆದೇಶ ಈ ನಿರ್ಧಾ ರದ ಬಗ್ಗೆ ಮರುಪರಿಶೀಲನೆ ಮಾಡ ಬೇಕಾದ ಸಂದರ್ಭ ಸೃಷ್ಟಿಸಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಎಲ್ಪಿಜಿ ವಿತರಣಾ ಕೇಂದ್ರಗಳಲ್ಲೂ ಆಧಾರ್ ಕೇಂದ್ರಗಳನ್ನು ಸ್ಥಾಪಿಸುವುದು ಕೇಂದ್ರದ ಇರಾದೆ ಆಗಿತ್ತು. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಕೇಂದ್ರಕ್ಕಿತ್ತು. ತುಮಕೂರು, ಮೈಸೂರು ಮತ್ತು ಧಾರವಾಡ ಜಿಲ್ಲೆಗಳೂ ಸೇರಿದಂತೆ ಒಟ್ಟು 22 ಜಿಲ್ಲೆಗಳ ಎಲ್ಪಿಜಿ ಗ್ರಾಹಕರಿಗೆ ನೀಡಬೇಕಿರುವ ಸಬ್ಸಿಡಿಯನ್ನು, ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ವ್ಯವಸ್ಥೆ ಮಾರ್ಚ್ನಿಂದ ಆರಂಭ ವಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದ್ದ ಕಾರಣ, ಆಧಾರ್ ಸಂಖ್ಯೆ ಪಡೆದುಕೊಳ್ಳಲು ಜನ ಮುಗಿ ಬೀಳಬಹುದು ಎಂದು ಇ–ಆಡಳಿತ ಕೇಂದ್ರ ನಿರೀಕ್ಷಿಸಿತ್ತು.
ಆಧಾರ್ ಗುರುತಿನ ಚೀಟಿ ನೀಡುವ ವಿಚಾರದಲ್ಲಿ ನೋಡಲ್ ಸಂಸ್ಥೆಯಾಗಿ ರುವ ಇ–ಆಡಳಿತ ಕೇಂದ್ರ, ಇದುವರೆಗೆ ರಾಜ್ಯದ ಒಟ್ಟು ಶೇಕಡ 58ರಷ್ಟು ಜನರನ್ನು ಆಧಾರ್ ಯೋಜನೆಯಡಿ ನೋಂದಾಯಿಸಿದೆ. ರಾಜ್ಯದ ಶೇಕಡ 47ರಷ್ಟು ಜನರಿಗೆ ಆಧಾರ್ ಸಂಖ್ಯೆ ನಿಗದಿ
ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಧಾರ್ ಚೀಟಿ ಪಡೆದು ಕೊಳ್ಳಲು ಬರುವ ಜನರ ಸಂಖ್ಯೆ ಇಳಿಮುಖವಾಗಿದೆ. ಆಧಾರ್ ಕೇಂದ್ರ ಗಳನ್ನು ತೆರೆದಿಟ್ಟುಕೊಂಡು, ಜನರಿಂದ ಸೂಕ್ತ ಪ್ರತಿಕ್ರಿಯೆ ದೊರೆಯದೆ, ಹಣ ಪೋಲಾಗುವ ಆತಂಕವೂ ಕೆಲವು ಅಧಿ ಕಾರಿಗಳಿಗೆ ಇದೆ. ಆಧಾರ್ ನೋಂದಣಿ ಕಾರ್ಯವನ್ನು ₨ 140ಕೋಟಿ ವೆಚ್ಚ ದಲ್ಲಿ ಒಟ್ಟು 18 ಖಾಸಗಿ ಕಂಪೆನಿಗಳಿಗೆ ಹೊರಗುತ್ತಿಗೆ ನೀಡಲಾಗಿದೆ. ಒಂದು ನೋಂದಾವಣೆಗೆ ಕಂಪೆನಿಗಳು ಸರ್ಕಾರ ದಿಂದ ₨ 26 ಪಡೆದುಕೊಳ್ಳುತ್ತಿವೆ.
ಹೊರಗುತ್ತಿಗೆ ಪಡೆದುಕೊಂಡಿರುವ ಕಂಪೆನಿಗಳು ಈಗ ತಮ್ಮ ಕೆಲಸವನ್ನು ಇನ್ನಷ್ಟು ನಿಧಾನ ಮಾಡಬಹುದು ಎಂದು ಅಧಿಕಾರಿಯೊಬ್ಬರು ಅನು ಮಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಾಧಿಕಾರ ಸಹ ಜನರ ಬಯೊ ಮೆಟ್ರಿಕ್ ಮಾಹಿತಿ ಸಂಗ್ರಹಿಸುತ್ತಿರುವ ಕಾರಣ, ಆಧಾರ್ ಯೋಜನೆ ಮುಂದು ವರಿಸಬೇಕೇ ಬೇಡವೇ ಎಂಬ ಗೊಂದಲ ಸರ್ಕಾರವನ್ನು 2011ರಲ್ಲೂ ಕಾಡಿತ್ತು. ಆಗ ಆಧಾರ್ ನೋಂದಣಿ ಕಾರ್ಯ ವನ್ನು ಸರಿಸುಮಾರು ಒಂದು ವರ್ಷ ದವರೆಗೆ ನಿಲ್ಲಿಸಲಾಗಿತ್ತು. ನಂತರ ಕಳೆದ ಡಿಸೆಂಬರ್ನಲ್ಲಿ ನೋಂದಣಿ ಕಾರ್ಯಕ್ಕೆ ಮರುಚಾಲನೆ ನೀಡಲಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಇ–ಇಲಾಖೆ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಿ.ಎಸ್. ರವೀಂದ್ರನ್, ‘ಆಧಾರ್ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.