ಹೈದರಾಬಾದ್ (ಪಿಟಿಐ): ಹೈದರಾಬಾದ್ನಲ್ಲಿ ಗುರುವಾರ ಸಂಭವಿಸಿದ ಅವಳಿ ಬಾಂಬ್ ಸ್ಫೋಟಗಳಲ್ಲಿ ಸತ್ತವರ ಸಂಖ್ಯೆ ಶುಕ್ರವಾರ 16ಕ್ಕೆ ಏರಿದ್ದು, ಪ್ರಾಥಮಿಕ ತನಿಖೆಯು ಇಂಡಿಯನ್ ಮುಜಾಯಿದ್ದೀನ್ನತ್ತ ಬೊಟ್ಟು ಮಾಡಿದೆ.
ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ)ಯನ್ನು ಸ್ಫೋಟದಲ್ಲಿ ಬಳಸಿರುವುದು ಖಚಿತಪಟ್ಟಿದ್ದು, ಇಂಡಿಯನ್ ಮುಜಾಯಿದ್ದೀನ್(ಐಎಂ) ಈ ಹಿಂದಿನ ಸ್ಫೋಟಗಳಲ್ಲೂ ಇದೇ ಮಾದರಿಯನ್ನು ಉಪಯೋಗಿಸಿತ್ತು. ಇದರಿಂದಾಗಿ ಐಎಂ ನತ್ತಲೇ ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿದ್ದು, ಇವರಲ್ಲಿ 14 ಮೃತದೇಹವನ್ನು ಅವರವರ ಬಂಧುಗಳಿಗೆ ನೀಡಲಾಗಿದೆ. ಒಟ್ಟು 119 ಮಂದಿ ಈ ಭೀಕರ ಸ್ಫೋಟಗಳಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಗೃಹಸಚಿವ ಸುಶೀಲ್ಕುಮಾರ್ ಶಿಂಧೆ ಆಸ್ಪತ್ರೆಗೂ ತೆರಳಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ದಾಳಿಯ ಕುರಿತು ಯಾವುದೇ ಖಚಿತ ಪೂರ್ವಮಾಹಿತಿ ಇರಲಿಲ್ಲ. ಹಾಗಾಗಿ ಕೇವಲ ಸಾಮಾನ್ಯ ಎಚ್ಚರಿಕೆಯನ್ನಷ್ಟೆ ರಾಜ್ಯಗಳಿಗೆ ನೀಡಲಾಗಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದರು.
ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪಾತ್ರದ ಕುರಿತು ಕೇಳಲಾದ ಪ್ರಶ್ನೆಗೆ ಸದ್ಯಕ್ಕೆ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಷ್ಟೆ ಉತ್ತರಿಸಿದರು.
ವ್ಯಾಪಕ ಖಂಡನೆ : ಅವಳಿ ಸ್ಫೋಟ ಕುರಿತು ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತದೊಂದಿಗೆ ಅಮೆರಿಕ ಇರುವುದಾಗಿ ತಿಳಿಸಿದೆ. ಅಲ್ಲದೆ ಘಟನೆಯ ತನಿಖೆಗೆ ಬೇಕಾದ ಎಲ್ಲಾ ಸಹಾಯವನ್ನು ನೀಡುವುದಾಗಿ ತಿಳಿಸಿದೆ.
ಪಾಕಿಸ್ತಾನ, ಆಸ್ಟ್ರೇಲಿಯಾ ಸೇರಿದಂತೆ ನಾನಾ ದೇಶಗಳು ಘಟನೆಯನ್ನು ಬಲವಾಗಿ ಖಂಡಿಸಿವೆ.