ಚಿತ್ರದುರ್ಗ: ಕೊರೆಯುವ ಚಳಿಯ ನಡುವೆ ಮಧ್ಯರಾತ್ರಿಯಲ್ಲಿ ನಡೆಯುವ ಅಣ್ಣ-ತಂಗಿ ಆರತಿ ಬಾನೋತ್ಸವ ವೀಕ್ಷಿಸುವುದೇ ಒಂದು ಸೊಗಸು. ಹೊಸದುರ್ಗ ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ ಶೂನ್ಯಮಾಸ ಕಳೆದ ಮೂರು ದಿನಗಳ ನಂತರ ಅಂಜನೇಯಸ್ವಾಮಿ ಮತ್ತು ಕೆರೆಯಾಗಳಮ್ಮದೇವಿಯ ತಂಬಿಟ್ಟಿನ ಆರತಿ ಬಾನೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಈ ಬಾರಿ ಆರತಿ ಬಾನೋತ್ಸವ ಜ. 8ರಂದು ನಡೆಯಲಿದ್ದು, ಗ್ರಾಮದ ಬೀದಿಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ಗ್ರಾಮದ ಮೂರ್ನಾಲ್ಕು ಸಮುದಾಯದವರು ಮಾತ್ರ ತಂಬಿಟ್ಟಿನ ಆರತಿ ತಯಾರಿಸಿ, ದೇವರಿಗೆ ಭಕ್ತಿ ಸಮರ್ಪಿಸುವುದು ನಡೆದುಕೊಂಡು ಬಂದಿರುವ ಪದ್ಧತಿ. ಪ್ರತಿವರ್ಷ ಶನಿವಾರ ಮಾತ್ರ ಆರತಿ ಬಾನೋತ್ಸವ ಆಚರಣೆ ನಡೆಯುತ್ತದೆ. ಇಲ್ಲಿನ ಬಾನೋತ್ಸವ ನಂತರ ಗ್ರಾಮದ ಸುತ್ತಮುತ್ತಲಿನ ಏಳು ಹಳ್ಳಿಗಳಲ್ಲಿ ಆರತಿ ಬಾನೋತ್ಸವ ನಡೆಯುತ್ತದೆ. ಅಂದು ಮನೆಗಳಲ್ಲಿ ನವಣಕ್ಕಿಪುಡಿ ಹಾಗೂ ಬೆಲ್ಲ ಮಿಶ್ರಣಮಾಡಿ ಒಳಕಲ್ಲಿನಲ್ಲಿ ಜೋಡಿ ಒನಕೆಗಳ ಮೂಲಕ ನೀರು ಬೆರಸದೆ ಕುಟ್ಟಲಾಗುತ್ತದೆ.
ಈ ಸಂದರ್ಭದಲ್ಲಿ ಮಹಿಳೆಯರು ಸೊಗಸಾಗಿ ದೇವರ ಪದಗಳನ್ನು ಹಾಡುವುದುಂಟು. ಮೂರ್ನಾಲ್ಕು ಗಂಟೆಗಳ ಕಾಲ ತಂಬಿಟ್ಟು ಕುಟ್ಟಿ ಆದನ್ನು ಆರತಿ ರೂಪದಲ್ಲಿ ಕೂಡಿಸಲಾಗುತ್ತದೆ. ಅಂದು ಮಧ್ಯರಾತ್ರಿ 12.30ರ ಸುಮಾರಿಗೆ ಗ್ರಾಮದ ದೇವಸ್ಥಾನದ ಆವರಣದಲ್ಲಿ ಆಂಜನೇಯಸ್ವಾಮಿ ಹಾಗೂ ಕೆರೆಯಾಗಳಮ್ಮದೇವಿ ಸಮ್ಮುಖದಲ್ಲಿ ಆರತಿ ಬಾನೋತ್ಸವ ನಡೆಯುತ್ತದೆ. ಮಹಿಳೆಯರು ಮನೆಗಳಲ್ಲಿ ತಂಬಿಟ್ಟಿನ ಆರತಿಯಲ್ಲಿ ದೀಪ ಬೆಳಗಿಸಿ ಪೂಜೆ ಸಲ್ಲಿಸಿದ ನಂತರ ತಲೆಮೇಲೆ ಹೊತ್ತುಕೊಂಡು ಆರತಿ ಬಾನೋತ್ಸವದಲ್ಲಿ ಪಾಲ್ಗೊಳ್ಳುವುದು ವಾಡಿಕೆ.
ಮಧ್ಯರಾತ್ರಿ 12.30ರಿಂದ ಬೆಳಿಗ್ಗೆ 8ರವರೆಗೆ ನಡೆಯುವ ಆರತಿ ಬಾನೋತ್ಸವದ ್ಲಬೆಳಗಿನಜಾವ 4ಗಂಟೆಗೆ ಸೋಮನ ವಿಶೇಷ ಕುಣಿತ ಆರಂಭವಾಗಲಿದೆ. ಆರತಿ ಬಾನೋತ್ಸವದ ನಂತರ ಗ್ರಾಮದಲ್ಲಿ ವಾದ್ಯಗಳೊಂದಿಗೆ ಆಂಜನೇಯಸ್ವಾಮಿ ಮತ್ತು ಕೆರೆಯಾಗಳಮ್ಮದೇವಿ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಊರ ಬಾಗಿಲಿಗೆ ಮೇಕೆ ಬಲಿ ನೀಡುವ ಮೂಲಕ ಆರತಿ ಬಾನೋತ್ಸವಕ್ಕೆ ತೆರೆ ಬೀಳಲಿದೆ.